Thursday, March 8, 2012

ಚಪ್ಪಲಿ ಮೋಹ

ನನಗಾಗ ೧೦ ವರ್ಷ ಇರಬೇಕು. ಅಮ್ಮ-ಅಪ್ಪ ಇಬ್ಬರೂ ಕಷ್ಟ ಪಟ್ಟು ನಮ್ಮ ಸಂಸಾರ ರಥ ಎಳೆಯುತ್ತಿದ್ದ ಕಾಲವದು. ಆಗಿನ ಕಾಲಕ್ಕೆ ನನ್ನ ಆಸೆಗಳು ಆಕಾಶದಷ್ಟು ಎತ್ತರಕ್ಕೆ ಇರುತ್ತಿದ್ದವು. ಈಗಲೂ ಇವೆ, ಆ ಮಾತು ಬೇರೆ. ನನ್ನ ಆಸೆಗಳ ತೀವ್ರತೆಯನ್ನು ನೋಡಿ ಅಮ್ಮ ಯಾವಾಗಲೂ ಹೇಳೋರು "ನೀನು ರಾಜಾನ ಮಗ ಆಗಿ ಹುಟ್ಟಬೇಕಿತ್ತು, ತಪ್ಪಿ ಬಡ ಮಾಸ್ತರ್ ಮಗ ಆಗಿ ಹುಟ್ಟೀ". ಅದಕ್ಕೆ ನಾನು ಕೊಡ್ತಾ ಇದ್ದ ಉತ್ತರ ಈಗಲೂ ನನಗೆ ನಗು ತರಿಸುತ್ತದೆ. "ಅಮ್ಮ ಈಗರ ಏನಾತು, ಅಪ್ಪಗ ರಾಜ ಆಗು ಅನ್ನು, ನಾನು ರಾಜಾನ ಮಗ ಆಗ್ತೀನಿ". ನನ್ನ ಉತ್ತರ ಅವರಿಗೆ ನಗು ತರುತ್ತಿತ್ತೋ, ನೋವು ತರುತ್ತಿತ್ತೋ ನನಗಂತೂ ಗೊತ್ತಿಲ್ಲ. ಅವರ ಕೈಲಾದ ಕೆಲವೊಮ್ಮೆ ಕೈಲಾಗದ ಆಸೆಗಳನ್ನು ಕೂಡ ನೆರೆವೇರಿಸುತ್ತಿದ್ದರು. ನನಗೆ ಅದರ ಅರಿವು ಅಷ್ಟರಮಟ್ಟಿಗೆ ಆಗ ಇರಲಿಕ್ಕಿಲ್ಲ. ಅಂತಹದ್ದೇ ಒಂದು ಆಸೆ ಈಡೇರಿ, ಒಡೆದು ಹೋದ ಒಂದು ಘಟನೆ ಈ ಬರಹಕ್ಕೆ ನಾಂದಿ. 
ನನಗೆ ಮೊದಲಿನಿಂದಲೂ ಚಪ್ಪಲಿ, ಬೂಟು, ಬಟ್ಟೆ ಮತ್ತು ಆಟಿಕೆ (electronic) ಇವೆಲ್ಲದರ ಮೇಲೆ ಎಲ್ಲಿಲ್ಲದ ಮೋಹ. ನನ್ನ ಸ್ನೇಹಿತರು ತೂತು ಬಿದ್ದ ಚಡ್ಡಿ ಹಾಕ್ಕೊಂಡು ಶಾಲೆಗೆ ಬಂದ್ರೆ, ನಾನು ಮಾತ್ರ ಫುಲ್ ಪ್ಯಾಂಟ್ ಧರಿಸ್ತ ಇದ್ದೆ. ಇನ್ನೂ ಹೇಳಬೇಕು ಅಂದ್ರೆ, ಮನೆದೇವ್ರು (ರವಿಚಂದ್ರನ್ ಸಿನಿಮ) ನೋಡಿ ಅದರಲ್ಲಿ ಅಪ್ಪ-ಮಗ ಒಂದೇ ತರಹ ಬಟ್ಟೆ ಹಾಕಿದ್ರು ಅನ್ನೋ ಕಾರಣಕ್ಕೆ ನಮ್ಮಪ್ಪನಿಗೂ ಅದೇ ತರಹದ ಬಟ್ಟೆ ಡಿಸೈನ್ ಮಾಡಿಸಿದ ಭೂಪ ನಾನು. ಅವರಿಗೋ ಆ ಪ್ಯಾಂಟ್ ಹೊಲಿಸಿಕೊಲ್ಲೋಕೆ ಎಲ್ಲಿಲ್ಲದ ಮುಜುಗರ. ನನಗೋ ಎಲ್ಲಿಲ್ಲದ ಆಸೆ. ಕೊನೆಗೂ ನನ್ನ ಆಸೆ ಗೆದ್ದಿತ್ತು. ಪ್ಯಾಂಟ್ ಆದಮೇಲೆ ಅದು ಅಲ್ಲಿಗೆ ನಿಲ್ಲಲಿಲ್ಲ, ಚಪ್ಪಲಿ ಕೂಡ ಬೇಕು ಅಂದೇ. ಸರಿ, ನಮ್ಮ ಊರಿನಲ್ಲಿ ಇರುವ ಎಲ್ಲ ಚಪ್ಪಲಿ ಅಂಗಡಿಗಳಿಗೆ ಅಲೆದಾಡಿ ಇದ್ದ ಚಪ್ಪಲಿ ಸವೆಸಿದೆ. ಕೊನೆಗೆ ರವಿಚಂದ್ರನ್ ಹಾಕಿದಂತ ಚಪ್ಪಲಿಗಳು ಸಿಕ್ಕವು. ಬೆಲೆ ರೂ. ೨೫. ಸಾಮಾನ್ಯವಾಗಿ ನನ್ನ ಚಪ್ಪಲಿ ಬರ್ತಾ ಇದ್ದುದು ೫ ರೂಪಾಯಿಗೆ. ೫ ಪಟ್ಟು ದುಬಾರಿ ಇರೋ ಚಪ್ಪಲಿಗಳನ್ನ ನಮ್ಮಪ್ಪ ಕೊಡಿಸಿದರು. ನಾನು ಸ್ನಾನ ಮಾಡ್ತಾ ಇದ್ದುದು ಗಡಿಬಿಡಿಯಿಂದಾದ್ರು, ಆ ಚಪ್ಪಲಿಗಳಿಗೆ ಮಾತ್ರ ಸಮಯ ತೆಗೆದುಕೊಂಡು ಸ್ವಚ್ಚಗೊಳಿಸ್ತ ಇದ್ದೆ. ಅದೇಕೋ ಆ ಚಪ್ಪಲಿಗಳ ಮೇಲೆ ಅತಿಯಾದ ಪ್ರೀತಿ.
ಒಂದು ದಿನ ಪಕ್ಕದೂರಿಗೆ ಮದುವೆಗೆ ಹೋಗುವ ಸಂದರ್ಭ ಬಂತು. ನಾನು ಮನೆದೇವ್ರು ಗೆಟಪ್ಪಿನಲ್ಲಿದ್ದೆ. ಅಪ್ಪ, ಅಮ್ಮ, ಅಕ್ಕ ಮತ್ತು ನಾನು ಬಸ್ ಹತ್ತಿ ಮದುವೆ ಮನೆಗೆ ಹೋದ್ವಿ. ನನಗೋ ನನ್ನದೇ ಚಿಂತೆ. ಏನಂತೀರಾ? ಮದುವೆ ಮನೆಯಲ್ಲಿ ನನ್ನ ಚಪ್ಪಲಿಗಳನ್ನು ಯಾರಾದ್ರೂ ಕದ್ದುಬಿಟ್ಟರೆ? ಮೊದಲೇ ನನ್ನ ತಲೆ 300kms ಸ್ಪೀಡಲ್ಲಿ ಓಡತ ಇತ್ತು. ಆ ಸಮಸ್ಯೆಗೆ ಪರಿಹಾರ ಹುಡುಕೋದು ಕಷ್ಟ ಆಗಲಿಲ್ಲ. ಅಲ್ಲೇ ಇದ್ದ ಒಂದು ಚೀಲವನ್ನು ತೆಗೆದುಕೊಂಡು ಅದರಲ್ಲಿ ಚಪ್ಪಲಿ ಇಟ್ಟು, ಯಾರಿಗೂ ಕಾಣದ ಹಾಗೆ ಮೂಲೆಯಲ್ಲಿ ಅಡಗಿಸಿಟ್ಟೆ. ಮದುವೆ ಆಯಿತು, ಎಲ್ಲರು ತಮ್ಮ ತಮ್ಮ ಮನೆಗೆ ಹೋದರು. ನಾವೂ ಮರಳಬೇಕಾದ ಸಮಯ ಬಂತು. ಅಪ್ಪ, ಅಮ್ಮ, ಅಕ್ಕ ಎಲ್ಲರು ರೆಡಿಯಾಗಿದ್ದರು. ನಾನು ಮಾತ್ರ ನನ್ನ ಆಟದಲ್ಲಿ ಮಗ್ನನಾಗಿದ್ದೆ. ಕೂಗಿ ಕರೆದರು "ಲೇಟಾಗತದ ಬಾರೋ. ಬಸ್ ಹೋದ್ರ ಮತ್ತ ಸಿಗುದಿಲ್ಲ". ಒಲ್ಲದ ಮನಸ್ಸಿನಿಂದ ಆಟ ಬಿಟ್ಟು ಬಂದು, ಇರೋ ಬಾರೋ ದೊಡ್ದೊರಿಗೆಲ್ಲ ಕಾಲು ಮುಗಿದು, ಚಪ್ಪಲಿ ಹಾಕ್ಕೊಂಡು ಬರ್ತೀನಿ ಅಂತ ಚಪ್ಪಲಿ ಅಡಗಿಸಿಟ್ಟಿದ್ದ ಜಾಗೆಕ್ಕೆ ಹೋದೆ. ನೀವು ಅನ್ಕೊಂಡ ಹಾಗೆನೆ ಆಗಿತ್ತು. ನನ್ನ ಚಪ್ಪಲಿಗಳು ಚೀಲದ ಸಮೇತ ಮಾಯವಾಗಿದ್ದವು. ಶರಪಂಜರ ಕಲ್ಪನಾ ಥರ "ಇಲ್ಲೇ ಕಳಕೊಂಡೆ..."  ಅನ್ನೋವಷ್ಟು ಬೇಜಾರಾಯ್ತು. ಗೊತ್ತಿಲ್ಲದೇ, ಕಣ್ಣಲ್ಲಿ ಕಣ್ಣೀರು ಉಕ್ಕಿ ಬಂತು. ಅದೇನು ಚಪ್ಪಲಿ ಕಳೆದುಕೊಂಡ ದು:ಖವೋ ಅಥವಾ ಅಷ್ಟು ದುಬಾರಿ ಚಪ್ಪಲಿ ಕಳೆದುಕೊಂಡ ನನಗೆ ಮತ್ತೆ ಅಂತ ಚಪ್ಪಲಿ ಕೊಡಿಸದೇ ಇರಬಹುದು ಅನ್ನೋ ಕಾರಣಕ್ಕೋ ಗೊತ್ತಿಲ್ಲ. ಆದ್ರೆ ನೋವಾಗಿದ್ದಂತು ನಿಜ. ಬರೆಗಾಲಿನಿಂದ ರವಿಚಂದ್ರನ್ ನಡೆದರೆ ಹೇಗಿರುತ್ತೋ ಹಾಗಿತೂ ನನ್ನ ಪರಿಸ್ಥಿತಿ. 

ಮತ್ತೆ ಸಿಗ್ತೀನಿ...    

No comments:

Post a Comment