Tuesday, March 6, 2012

ನಾನು ಮಾಡಿದ ಒಳ್ಳೆ ಕೆಲಸ

ನನ್ನದು ೧ನೇ ತರಗತಿಯಿಂದ ಕನ್ನಡ ಮಾಧ್ಯಮ. 
ಓದಿದ್ದು ಕನ್ನಡ ಗಂಡು ಮಕ್ಕಳ ಶಾಲೆ ನಂ ೧. ನಮ್ಮ ಶಾಲೆಯಲ್ಲಿ ಒಂದು ಕಟ್ಟುನಿಟ್ಟಾದ ನಿಯಮ ಇತ್ತು. ಎಲ್ಲರೂ "ಒಳ್ಳೆ ಕೆಲಸ" ಪುಸ್ತಕ ಬರೀಲೇಬೇಕು. ಏನಿದು ಒಳ್ಳೆ ಕೆಲಸದ ಪುಸ್ತಕ ಅಂತೀರಾ, ಹೇಳ್ತೀನಿ. ಪ್ರತಿನಿತ್ಯ ಪ್ರತಿಯೊಬ್ರು ಕನಿಷ್ಠ ಪಕ್ಷ ಒಂದಾದ್ರೂ ಒಳ್ಳೆ ಕೆಲಸ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಎಲ್ಲರೂ  ಕಾಡ್ದಾಯವಾಗಿ ಬರೀಲೆಬೇಕಿತ್ತು. ನಾವು ಚಿಕ್ಕವರು, ಒಳ್ಳೆ ಕೆಲಸ ಹುಡುಕಿಕೊಂಡು ಮಾಡಬೇಕು. ಇಂಥದ್ದರಲ್ಲಿ ದಿನ ದಿನ ಒಂದು ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಭಾರ ತಲೆ ಮೇಲೆ ಇದ್ರೆ ಹೇಗೆ. ಅದರಲ್ಲೂ ಶಾಲೆ ತೆರೆದಿರೋ ೨೧೨ ದಿನಗಳಿಗೂ ಒಂದೊಂದು ಒಳ್ಳೆ ಕೆಲಸ ಬರೀಯೋದು ಯಾವ ಕರ್ಮ ಅನ್ನೊಂದು ನನ್ನ ಭಾವನೆ ಆಗಿನಕಾಲಕ್ಕೆ. ಆಗ ನಾನು ಬರೀತಾ ಇದ್ದ ಕೆಲವು ಒಳ್ಳೆ ಕೆಲಸದ ಪರಿ ಹೀಗಿರುತ್ತಿತ್ತು. "ನಾನು ಭಿಕ್ಷುಕನಿಗೆ ೧೦ ಪೈಸೆ ಕೊಟ್ಟೆನು". "ನಾನು ಒಬ್ಬ ಕುರುಡನಿಗೆ ರಸ್ತೆ ದಾಟಿಸಿದೆನು", "ರಸ್ತೆಯಲ್ಲಿ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕೆ ಇತ್ತೇನು", "ನಾನು ನಾಯಿಗೆ ಬ್ರೆಡ್ಡು ತಿನ್ನಿಸಿದೆನು" ಇನ್ನೂ ಹಲವು ಹುಚ್ಚು ವಾಕ್ಯಗಳು ಇರುತ್ತಿದ್ದವು. ಒಂದೇ ವಾರದಲ್ಲಿ ಎರಡು ಸಲ ರಸ್ತೆಯಲ್ಲಿ ಬಿದ್ದ ಕಲ್ಲನ್ನು ಪಕ್ಕಕ್ಕೆ ಇಟ್ಟೆನು ಅಂತ ಬರೆದಾಗ ನಮ್ಮ ಮೇಷ್ಟ್ರು ಕೇಳೋರು "ಏನೋ ಇದು ಬರಿದದ್ದನ್ನೇ ಬರಿದಿದ್ದೀಯ?" ಆಗ ನನ್ನ ವಿನಮ್ರ ಉತ್ತರ "ಇದು ಮನೆ ಹತ್ರ ಇದ್ದ ಕಲ್ಲು ಸರ್ ಮೊನ್ನೆ ಬರೆದದ್ದು ಶಾಲೆ ಹತ್ರ ಇದ್ದ ಕಲ್ಲು". ಮೇಷ್ಟರಿಗೂ ಗೊತ್ತಿತ್ತು, ಈ ನನ್ಮಗ ರಸ್ತೆಯಲ್ಲಿ ಕಲ್ಲು ಇಲ್ಲದೆ ಇದ್ರೂ, ಎಲ್ಲಿನದೋ ಒಂದು ತಂದು ಹಾಕಿ ಪಕ್ಕಕ್ಕೆ ಇಡ್ತಾನೆ ಅಂತ.  
ಈಗ ಆ ದಿನಗಳನ್ನ ನೆನೆಸಿಕೊಂಡರೆ ನಗು ಬರುತ್ತೆ, ಜೊತೆಗೆ ಒಂದು ವಿಚಾರ ಕೂಡ ಹೊಳಿಯುತ್ತೆ. ಅಂತಹದ್ದೇ ಡೈರಿ ಈಗ ಬರೆಯೋ ಹಾಗೆ ಆದ್ರೆ? ವಾರಕ್ಕೆ ಒಂದು ವಾಕ್ಯ ಬರೆಯೋದು ಕಷ್ಟ ಅನ್ಸುತ್ತೆ. ಇವತ್ತಿನ ಪೈಪೋಟಿ ಜೀವನ ಶೈಲಿಯಲ್ಲಿ, ನಮ್ಮ ಕೆಲಸ ನಾವು ಮಾಡ್ಕೊಂಡು, ಸಂಜೆ ಮನೆಗೆ ಬಂದು ಹೆಣದ ಥರ ಬಿದ್ದುಕೊಳ್ಲೋ ನಮಗೆ ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಅನಿವಾರ್ಯತೆ ಎಲ್ಲಿದೆ. ಆದ್ರೆ ಒಳ್ಳೆ ಕೆಲಸ ಅನ್ನೋದು ಅನಿವಾರ್ಯತೆ ಅಲ್ಲದೇ ಇದ್ದರು ಅದು ಮಾನವ ಧರ್ಮ. ನಾವು ಮಾಡೋ ಒಂದು ಸಣ್ಣ ಪ್ರಯತ್ನ ಯಾರದ್ದೋ ಜೀವನದಲ್ಲಿ ಯಶಸ್ಸು ತಂದು ಕೊಡುತ್ತೆ ಅನ್ನೋದಾದ್ರೆ ಯಾಕೆ ಮಾಡಬಾರದು? ಮೊನ್ನೆ ನನಗೊಂದು resume ಬಂತು, ನಾನು ಮಾಡಿದ್ದಿಷ್ಟೇ, ನನಗೆ ಗೊತ್ತಿರೋರಿಗೆಲ್ಲ ಆ ಹುಡುಗನಿಗೆ ಕೆಲಸ ಹುಡುಕೋಕೆ ನೆರವಾಗಿ ಅಂತ ಕೇಳಿಕೊಂಡೆ. ಕಳಿಸಿದ್ದು ೪೦-೫೦ ಜನಕ್ಕೆ. ಆದ್ರೆ ಎಷ್ಟು ಜನ ಆ ನೆರವಿನ ಕೋರಿಕೆಗೆ ಸ್ಪಂದಿಸಿದ್ರೋ ಗೊತ್ತಿಲ್ಲ. ಆದರೆ ಮಾರನೆ ದಿನ ಬಂದ ಒಂದು ಮಿಂಚಂಚೆ ನನಗೆ ಖುಷಿ ತಂದಿತ್ತು. ನನ್ನ ಮಿತ್ರರಲ್ಲೊಬ್ಬ, ಅವನ ಮಿತ್ರನಿಗೆ ಆ ಮಿಂಚಂಚೆ ರವಾನೆ ಮಾಡಿದ್ದ. ಆ ಮಿತ್ರನ ಸಹಾಯದಿಂದ, ಹುಡುಗನಿಗೆ ಸಂದರ್ಶನ ಏರ್ಪಾಡು ಮಾಡಲಾಗಿತ್ತು. ತಕ್ಷಣವೇ ನನ್ನ ಮಿತ್ರನಿಗೆ ಮೆಸೇಜ್ ಮಾಡಿದೆ "Thanks for your efforts kano" ಅಂತ. ಅವನು ಹೇಳಿದ ಉತ್ತರ ನನ್ನನು ಮೂಕನನ್ನಾಗಿಸಿತ್ತು. "ಅಣ್ಣ, ನೀನೇ ಹೇಳಿದ್ದೆ ಒಂದು ದಿನ, ಯಾರಿಗಾದ್ರು ಒಂದೇ ಒಂದು ಸಲ ಒಳ್ಳೇದು ಮಾಡಿ ನೋಡು, ಅದರಲ್ಲಿ ಇರೋ ಖುಷಿ ಬೇರೆ ಯಾವುದರಲ್ಲೂ ಇಲ್ಲ ಅಂತ. ಇವತ್ತು ನನಗೆ ತುಂಬಾ ಖುಷಿ ಆಯಿತು" ಅವನ ಮಾತುಗಳಲ್ಲಿ ಆ ಆನಂದ ಉಕ್ಕಿ ಹರೀತಾ ಇತ್ತು. ನಾನು ಅವನಿಗೆ ಆ ಮಾತು ಹೇಳಿ ೪ ವರ್ಷ ಕಳೆದಿರಬೇಕು. ಯಾವಾಗಾ ಹೇಳಿದೆ ಅನ್ನೋದೂ ನನ್ನ ನೆನಪಲ್ಲೂ ಇಲ್ಲ. ವೈಚಾರಿಕವಾಗಿ ಅವನು ತುಂಬಾ ಎತ್ತರಕ್ಕೆ ಬೆಳೆದಿದ್ದ.

ಅದಕ್ಕೆ ಹೇಳಿದ್ದು, "ನಾನು ಮಡಿದ ಒಳ್ಳೆ ಕೆಲಸ" ಪುಸ್ತಕದ ಅಗತ್ಯ ಈಗ ಇದೆ.  

ಮತ್ತೆ ಸಿಗ್ತೀನಿ...

2 comments:

  1. Very nice,
    Really eega a book bari andre nange :D dinakke irali tingligondu entrynu sigalveno anta ansthide!!!

    Aaasru kelosarthi ansuthe eegina kaaldalli yarigu tondre kodade badktidinala :D ade dodda volle kelsa anta!!!

    e maathi ge opkondre namma nimma "Olle Kelasa" Book ge entry :) yenantiri

    ReplyDelete
  2. sakathaagide neevu barediruva shaili.. nijakku anthaha pustakada avashyakathe makkalige hagu doddavarige ibbarigu ide..

    Ramya avre: yarigu tondre kodade badkodu dodda olle kelsa antha helidralla adu 100kke 100 nija.. but navu madta iro kelsagalu namge gothildange bereyavrige tondre kodta irbahudu alva?

    ReplyDelete