Saturday, February 1, 2014

ಸುಮ್ನಿರೋಕೆ ಏನು ನಿನಗೆ?

ಬಹಳ ವಿಚಿತ್ರ ಅಂದ್ರೆ, ಕೆಲವೊಮ್ಮೆ ನಾನು ಮಾಡೋ ಕೆಲ್ಸ ನನ್ನನ್ನೇ ಪೇಚಿಗೀಡುಮಾಡಿಬಿಡುತ್ತೆ. ಮೊನ್ನೆ ಸಂಜೆ ಕೂಡ ಇಂಥದ್ದೊಂದು ಘಟನೆ ನಡೀತು. ಜಯದೇವ ಇಂದ ಬನಶಂಕರಿ ಗೆ ಹೊರಟ BMTC ಬಸ್ ಏರಿದೆ. ಬಸ್ಸಿನ ತುಂಬಾ ಜನ. ಭಾರತದ ಜನಸಂಖ್ಯಾ ಸ್ಫೋಟದ ನಿತ್ಯದರ್ಶನ ಇರುವಂತಿತ್ತು. ಹಾಗೂ ಹೀಗೂ ತಳ್ಳಿಕೊಂಡು ಬಸ್ಸಿನ ಕೊನೆಯ ಮೂಲೆಯಲ್ಲಿ ಬಂದು ನಿಂತೆ. ಅಷ್ಟು ಜನರ ಮಧ್ಯ ನನ್ನ ಕಣ್ಣಿಗೆ ಅದ್ಭುತವಾಗಿ ಕಂಡಿದ್ದು ಒಂದು ೬ ವರ್ಷದ ಮಗು ಅದರ ಪಕ್ಕದಲ್ಲಿ ನಿದ್ದೆ ಮಾಡುತ್ತ ಕುಳಿತಿದ್ದ ಒಬ್ಬ ಇಳಿವಯಸ್ಸಿನ ಯುವಕ ಅಥವಾ ಮುದಿವಯಸ್ಸಿನ ಯುವಕ ಅನ್ನಬಹುದು. ಯಾಕೆಂದ್ರೆ  ವ್ಯಕ್ತಿಯನ್ನ ಗಮನಿಸಿದರೆ ಅವನು ಆ ಮಗುವಿಗೆ ತಂದೆ ಅನ್ನೋವಷ್ಟು ಯುವಕ ಅಲ್ಲ, ಹಾಗೆ ತಾತ ಅನ್ನೋವಷ್ಟು ಮುದುಕ ಕೂಡ ಅಲ್ಲ. ಕುಂಭಕರ್ಣನ ಅಪರಾವತಾರನಂತೆ ನಿದ್ದ್ರಿಸುತ್ತಿದ ಆ ವ್ಯಕ್ತಿ. ನಾನು ಆ ವ್ಯಕ್ತಿಯನ್ನು ದಿಟ್ಟಿಸಿ ನೋಡಿದ್ದನ್ನ ಅರಿತ ಮಗು ಸಣ್ಣದೊಂದು ಕಿರುನಗೆಬೀರಿತು. ಮಕ್ಕಳ ನಗುವೇ ಹಾಗೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿಬಿಡುತ್ತದೆ. ಆ ಮಗುವಿನ ನಗುವಿಗೆ ನನ್ನ ನಗು ಪ್ರತ್ರಿಕ್ರಿಯ ಆಗಿತ್ತು. ಜನಜಂಗುಳಿ, ವಾಹನಗಳ ಆಕ್ರಂದನ, ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳು ಎಷ್ಟೆಷ್ಟೋ ವಿಷಯಗಳನ್ನು  ಒಟ್ಟಾರೆ ಅನುಭವಿಸುತ್ತಿದ್ದವು ಆ ಮಗುವಿನ ಕಣ್ಣುಗಳು. ತಾನೇನೆಲ್ಲ ನೋಡ್ತಾ ಇದ್ದೇನೆ ಅನ್ನೋ ಮಹದಾನಂದ ಆ ಮಗುವಿನ ಮುಖದಲ್ಲಿ. ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿತ್ತು ಆ ಸನ್ನಿವೇಷ. ಯಾಕೆಂದ್ರೆ ಅದೇ ತರಹದ ಅನುಭವಗಳನ್ನು ನಾನು ೬ ವಯಸ್ಸಿನವನಿದ್ದಾಗ ಬೆಳಗಾವಿಯಿಂದ ಬಾದಾಮಿಗೆ ಹೋಗುವ ಮಾರ್ಗದಲ್ಲಿ ಸವಿದಿದ್ದೆ. ಆಗ ನಾನೊಬ್ಬನೇ ಒಂಟಿಯಾಗಿ ಪ್ರಯಾಣಿಸುವ ಅನಿವಾರ್ಯತೆ ಇತ್ತು. ಇವತ್ತು ಈ ಮಗುವಿನ ಹತ್ತಿರ ಹೇಳಿಕೊಳ್ಳೋಕೆ ಅಂತ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೂ ಇಲ್ಲದ ಹಾಗೆ ಇದ್ದ.

ಕಣ್ಣಿನ ಭಾಷೆ ಅತ್ಯಂತ ಪ್ರಭಾವಿಯಾಗಿರುತ್ತದೆ. ಮಗು ನೋಡಿದ ಒಂದೊಂದು ವಿಷಯವನ್ನು ನನ್ನ ಹತ್ತಿರ ಹಂಚಿಕೊಳ್ಳುತ್ತಿದ್ದುದು ಆ ಕಣ್ಣಿನ ಮುಖೇನವೇ. ಮತ್ತೊಂದು ನಗು, ಇನ್ನೊಂದು ವಿಷಯ, ಮತ್ತೊಂದು ನಗು, ಹೊಸದೊಂದು ಕಥೆ, ಹೀಗೆ  ಸರಣಿ ಮುಂದುವರಿಯಿತು. ಕಿಟಕಿಯಲ್ಲಿ ಏನೋ ನೋಡುತ್ತಾ, ಒಮ್ಮೆಲೇ ಕತ್ತನ್ನು ಆಚೆ ಹಾಕಿದ ಮಗುವನ್ನು ನೋಡಿ ನಾನು ಗಾಬರಿಯಾದೆ. "ಏಯ್" ಅನ್ನೋ ನನ್ನ ಉದ್ಗಾರಕ್ಕೆ ಗೊರಕೆ ಹೊಡೆಯುತ್ತ ಮಗು ಪಕ್ಕ ಕೂತಿದ್ದ ಕುಂಭಕರ್ಣ ಎದ್ದುಬಿಟ್ಟ. ದಯೆ ದಾಕ್ಷಿಣ್ಯ ಇಲ್ಲದೆ ಮಗುವನ್ನ ಬಾಯಿಗೆ ಬಂದ ಹಾಗೆ ಬೈದ. ಅವನ ಬೈಗುಳಗಳ ಕೋಟಾ ಮುಗಿದ ನಂತರ ಮತ್ತೆ ನಿದ್ದೆ ಹೋದ. ಮಗು ಮುಖದಲ್ಲಿ ಬಂದ ಭಾವನೆ ಕೋಪವೋ, ದುಃಖವೋ ನನಗೆ ಗೊತ್ತಾಗಲಿಲ್ಲ. ಸುಮಾರು ಅರ್ಧಗಂಟೆಗಳ ಕಾಲ ನಡೆಸಿದ ಆ ಕಣ್ಣಿನ ಮಾತುಗಳು ನಿಂತು ಹೋಗಿದ್ದವು. ಮನಸ್ಸಿನೊಳಗೆ ನನಗೆ ನಾನೇ ಬೈದುಕೊಂಡೆ "ಸುಮ್ನಿರೋಕೆ ಏನು ನಿನಗೆ?'

ಮತ್ತೆ ಸಿಗ್ತೇನಿ... 
      

Wednesday, October 9, 2013

ಲವ್ ಪ್ರಾಬ್ಲಂ

ತುಂಬಾ ದಿನಾ ಆಯ್ತು ಬ್ಲಾಗಿನ ಬಾಗಿಲು ತೆರೆದು. ಸಿಕ್ಕಾಪಟ್ಟೆ ಕೆಲಸ, ಜೊತೆಗೆ   ಹೊಸ ನಾಟಕಗಳನ್ನು ಬರೆಯೋದರಲ್ಲಿ ಬಿಜಿಯಾಗಿದ್ದೆ. ತೊಂದ್ರೆ ಇಲ್ಲ ಮುಂದುವರಿಸೋಣ.   

ಮೊನ್ನೆ ನನ್ನ ಮಿತ್ರನ ಮಿತ್ರನೊಬ್ಬ ತನ್ನ ಲವ್ ಪ್ರಾಬ್ಲ್ಂ ನನ್ನ ಹತ್ರ ಹೇಳ್ಕೊಂಡ. "ಲವ್ ಪ್ರಾಬ್ಲಂ" ನೋಡಿ ಜಂಟಿ ಪದದ ಥರ ಕಾಣುತ್ತೆ. ಲವ್ ಗೆ ಪ್ರಾಬ್ಲಂ ಇರಬೇಕಾ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ನನ್ನ ಮನಸ್ಸಿಗೆ ಅನ್ನಿಸಿದ ಕೆಲವು ವಿಷಯಗಳನ್ನು ಹಂಚಿಕೊಳ್ತೀನಿ. 

ಒಂದು ಹುಡುಗ, ಒಂದು ಹುಡುಗಿ, ವರ್ಷಗಳ ಪರಿಚಯ, ಸ್ನೇಹ, ನಂಬಿಕೆ, ಇನ್ನೂ ಅನೇಕ ಹೇಳಲಾಗದ ಭಾವನೆಗಳ ಸುಂದರ ಹೂಗುಚ್ಛ ಈ ಲವ್. ದೇಶ, ಭಾಷೆ, ವಯಸ್ಸು, ಅಂತಸ್ತು ಈ ಎಲ್ಲವನ್ನೂ ಮೀರಿ ನಿಂತ ಸುಂದರ ಅನುಭವ ಈ ಲವ್. ಇಷ್ಟೆಲ್ಲ ಸುಂದರತೆ  ಜೊತೆಗೆ ಒಂದೇನಾದ್ರು ಕೊಂಕು ಇರಲೇಬೇಕಲ್ಲ. ಚಂದ್ರನಿಗೆ ಕಪ್ಪು ಕಲೆ, ಗುಲಾಬಿಯ ಹೂವಿಗೆ ಮುಳ್ಳು, ಹೀಗೆ ಲವ್ ಗೆ ಕೂಡ ಒಂದು ಕೊಂಕು ಇದ್ದೇ ಇದೆ. ತಮ್ಮ ಲವ್ ನ ಯಶಸ್ವಿಗೊಳಿಸಬೇಕು ಅನ್ನೋ ಆಸೆ ಹೊತ್ತ ಮನಸುಗಳಿಗೆ ತಣ್ಣೀರು ಎರಚೋ ಸಮಾಜ, ತಂದೆ-ತಾಯಿ, ಮತ್ತಿನ್ನ್ಯಾರೋ. ಇವರೆಲ್ಲ ಪ್ರೀತಿಗೆ ಬರುವ ಎಡರು ತೊಡರುಗಳು. ಯಾಕೆ ಈ ಪ್ರೀತಿಗೆ ಇಷ್ಟು ಅಡ್ದಿ ?

ಪಾಯಿಂಟ್ ೧ : ಹುಡುಗನ/ ಹುಡುಗಿಯ ಜಾತಿ, ಊರು-ಕೇರಿ, ಆಚಾರ-ವಿಚಾರ, ಇವೆಲ್ಲ ಇಬ್ಬರ ಮನೆಯ ಹಿರಿಯರಿಗೆ ಸರಿ ಹೋಗೋದಿಲ್ಲ. 

ನನ್ನ ನಿಲುವು : ಅಲ್ಲ ಸ್ವಾಮೀ... ಜಾತಿ ಅನ್ನೋದು ಮನುಷ್ಯ ಮಾಡಿಕೊಂಡಿದ್ದು ಅಲ್ಲವೇ? ಜಾತಿಯ ಮೂಲಕ ಮನುಷ್ಯನ ವ್ಯಕ್ತಿತ್ವ ಅಳೆಯಲು ಸಾಧ್ಯವೇ? ೨೧ನೇ ಶತಮಾನದಲ್ಲಿ ಬದುಕು ಸಾಗಿಸುತ್ತಿರೋ ನಾವು, ಜಾತಿ ಅನ್ನೋ ಬೇಲಿ ಹಾಕಿಕೊಳ್ಳಬೇಕ? "ಕುಲ ಕುಲ ಕುಲವೆಂದು ಹೊಡೆದಾಡದಿರಿ", "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?", "ಮನುಜ ಮತ ವಿಶ್ವ ಪಥ" ಈ ಎಲ್ಲ ಸಾಲುಗಳು ಕೇವಲ ಕೇಳಿ ಮರೆತು ಹೋಗೋದಕ್ಕ?

ಪಾಯಿಂಟ್ ೨ :  ಹುಡುಗನ/ಹುಡುಗಿಯ ಆರ್ಥಿಕ ಸ್ಥಿತಿಗತಿ. 
ನನ್ನ ನಿಲುವು:  ಅಲ್ಲ ಸ್ವಾಮೀ... ಹುಡುಗ, ಹುಡುಗಿ ಇಷ್ಟ ಪಟ್ಟ ಮೇಲೆ ದುಡ್ಡು ಕಾಸು ಯಾವ ಲೆಕ್ಕ? ದುಡ್ಡಿರೋ ಎಷ್ಟೋ ಜನ, ಕ್ಷಣ ಮಾತ್ರದಲ್ಲಿ ಬೀದಿಗೆ ಬಂದಿಲ್ಲವೇ? ಅದೇ ರೀತಿ ಕಡುಬಡವ ಶ್ರೀಮಂತನಾಗಿ ಬೆಳೆದಿಲ್ಲವೇ? ದುಡ್ಡು, ಅಂತಸ್ತು ಕ್ಷಣಿಕ, ಆದ್ರೆ ಪ್ರೀತಿ ಅನಂತ, ಅವಿರತ. 

ಪಾಯಿಂಟ್ ೩ : ತಂದೆ ತಾಯಿಯರ ಆಸೆ (ಹಠ) 
ನನ್ನ ನಿಲುವು :  ಹುಟ್ಟಿದ ಮರುಕ್ಷಣದಿಂದ ಹಾಕಿಕೊಳ್ಳುವ ಡೈಪರ್ ನಿಂದ ಹಿಡಿದು, ಓಡಿಸೋ ಗಾಡಿ, ಶರ್ಟು, ಪ್ಯಾ೦ಟ, ಹೇರ್ ಸ್ಟೈಲ್ ಎಲ್ಲವನ್ನೂ ತಮ್ಮ ಇಷ್ಟದಂತೆ ಕೊಡಿಸುತ್ತ ಬಂದವರಿಗೆ, ತಮ್ಮ ಅಳಿಯ/ ಸೊಸೆಯನ್ನೂ ತಾವೇ ಹುಡುಕಿ, ಆರಿಸಬೇಕು ಅನ್ನೋ ಆಸೆ. ಆಸೆ ಮಿತಿಯಲ್ಲಿ ಇದ್ದರೆ ಓಕೆ, ಆದ್ರೆ ಮಿತಿ ಮೀರಿದರೆ ಆ ಆಸೆ ಹಠ ಆಗಿಬಿಡುತ್ತದೆ. ಈ ಹಠ ತಮ್ಮ ಸ್ವಂತ ಮಕ್ಕಳ ಸಂತೋಷಕ್ಕೆ ಅಡ್ಡಿ ಆಗಲಿದೆ ಅನ್ನೋ ಚಿಕ್ಕ ವಿವೇಚನೆ ದೊಡ್ಡವರಿಗೆ ಬರೋದಿಲ್ಲ ಯಾಕೆ?

ಒಟ್ಟಾರೆ ಹೇಳ್ಬೇಕು ಅಂದ್ರೆ, ಮೇಲಿನ ಮೂರು ಅಂಶಗಳನ್ನು ಮೀರಿ ಯೋಚನೆ ಮಾಡಿದ್ದಲ್ಲಿ ಮಾತ್ರ ನಿಜವಾದ ಪ್ರೀತಿಗೆ ಯಶಸ್ಸು ಸಿಗೋದು ಸಾಧ್ಯ. ಹುಡುಗ, ಹುಡುಗಿ ಪ್ರೀತಿಸಿ ತಮ್ಮ ಬಾಳು ತಾವು ಕಟ್ಟಿಕೊಳ್ಳುತ್ತಾರೆ ಅನ್ನೋ ಭರವಸೆ ಇದ್ರೆ ಯಾಕೆ ಅಡ್ಡಿ ಪಡಿಸಬೇಕು? ತಾವು ಆಯ್ಕೆ ಮಾಡಿಕೊಂಡ ಜೀವನದ ಬಗ್ಗೆ ಅವರಿಗೆ ಒಲವು ಇರುತ್ತದೆ, ಅದನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸುವ ಬಗ್ಗೆ ಪ್ರಯತ್ನ ಇರುತ್ತದೆ. ಜೀವನ ಹೇಗೋ ನಡೆದು ಹೋಗುತ್ತದೆ ಅನ್ನೋದರ ಬದಲು, ಜೀವನ ಹೀಗೆ ಇರಬೇಕು ಅನ್ನೋ ಗುರಿ ಹುಟ್ಟುತ್ತದೆ. 

ಇವೆಲ್ಲವುಗಳನ್ನು ಮೀರಿ ಪ್ರೇಮಿಗಳನ್ನು ದೂರಮಾಡುವ ಪ್ರಯತ್ನಗಳು ನಡೆಯುತ್ತವೆ. ಸಮಾಜ, ತಂದೆ-ತಾಯಿಯರನ್ನ ಎದುರಿಸಿ/ ವಿರೋಧ ಕಟ್ಟಿಕೊಂಡು ಬಾಳು ನಡೆಸಬೇಕು ಅನ್ನೋರು ಮನೆ ಬಿಟ್ಟು ಹೋಗ್ತಾರೆ. ಧೈರ್ಯ ಇಲ್ಲದವರು ಪ್ರೀತಿಯನ್ನು ಸಾಯಿಸಿ, ಬೇರೆ ಬೇರೆ ಜೀವನ ನಡೆಸುತ್ತಾರೆ. ಆದ್ರೆ ಪ್ರೀತಿ ಸಾಯಿಸಿದ ಕೊರಗಿನಲ್ಲಿ, ಅವರೂ ದಿನನಿತ್ಯವೂ ಸಾಯುತ್ತಾರೆ. ಇವೆರೆಡು ಮಾಡಲು ಆಗದವರು ಕೆರೆ, ಬಾವಿ, ಮರ ಟ್ರೈನ್, ವಿಷ ಇನ್ನೂ ಏನೇನೊ ಮಾರ್ಗ ಹುಡುಕಿ ಸತ್ತು ಹೋಗ್ತಾರೆ. 

ಒಟ್ಟಿನಲ್ಲಿ ಸಂತೋಷವಾಗಿ ಇರಬೇಕಾದ  ಜೀವಗಳು ಕೊರಗುತ್ತವೆ ಇಲ್ಲ ಕೊನೆಯಾಗುತ್ತವೆ. ದಾರಿ ಯಾವುದೇ ಇರಲಿ, ಸಂತೋಷ ಅನ್ನೋದು ಮರೀಚಿಕೆಯಾಗಿಬಿಡುತ್ತದೆ. ಕ್ಷುಲ್ಲಕ ಕಾರಣಗಳಿಗೆ ಹೀಗೆಲ್ಲ ಆಗೋದು ಸರಿಯೇ? 

ಎಲ್ಲ ಮುಗಿದ ಮೇಲೆ, "ಮಕ್ಕಳು ಚೆನ್ನಾಗಿರಲಿ ಅಂತ ತಾನೇ ನಾವೆಲ್ಲಾ ಹೀಗೆ ಮಾಡಿದ್ದು" ಅನ್ನೋ ಎಷ್ಟೋ ಪಾಲಕರಿಗೆ ನನ್ನ ಈ ಪ್ರಶ್ನೆ ಅನ್ವಯಿಸುತ್ತದೆ. 

ಸೂಚನೆ  : ನಾನು ಹಿರಿಯರನ್ನು  ದ್ವೇಷಿಸೋನು ಅಲ್ಲ. ಆದ್ರೆ ಪ್ರೀತಿಯನ್ನು ಪ್ರೀತ್ಸೋನು


Sunday, March 3, 2013

ಹುಡುಕಾಟ

ನಾನು ಈಗ ಬರೀತಾ ಇರೋ ವಿಷಯ ಬಹಳ ಜನರ ಜೀವನದಲ್ಲಿ ನಡೆದಿರುತ್ತೆ. ಬೆಂಗಳೂರಿಗೆ ಬಂದು ಕೆಲಸ ಹುಡುಕೋ ಕ್ರಿಯೆಯಲ್ಲಿ ತೊಡಗಿದ್ದ ದಿನಗಳವು. ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ, ಒಳ್ಳೆ ಬಟ್ಟೆ ಧರಿಸಿ, ಕೈಲೊಂದು ಫೈಲ್ ಹಿಡಿದು, ಬಸ್ ಪಾಸ್ ಒಂದನ್ನು ತೆಗೆದುಕೊಂಡು, ಮನಸಲ್ಲಿ ಸ್ವಲ್ಪ ಉತ್ಸಾಹ ಹಾಗು ತಳಮಳ ಹೊತ್ತು, ಕಂಪನಿಯಿಂದ ಕಂಪನಿಗೆ ತಿರುಗಾಡುತ್ತಿದ್ದೆ. ನನ್ನ ಜೊತೆ ಇದ್ದದ್ದು ನನ್ನ ಇನ್ನೊಬ್ಬ ಮಿತ್ರ ರವಿ. ನಮ್ಮಿಬ್ಬರಿಗೂ ಕಂಪನಿಗಳಿಂದ ಕೇಳಿಬರುತ್ತಿದ್ದ ಮಾತು ಒಂದಿತ್ತು. ಅದು "ನೋ". ಮಾರ್ಕ್ಸ್ ಕಾರ್ಡಿನ ತುಂಬಾ ಮಾರ್ಕ್ಸ್ ಇತ್ತೇ ವಿನಃ ಹಣೆಯಲ್ಲಿ ಅದೃಷ್ಥ ರೇಖೆ ಇರಲಿಲ್ಲ. ದುಡೀತಿನಿ ಅನ್ನೋರಿಗೆ ಒಂದು ಕೆಲಸ ಕೊಡೋಕೆ ಆಗೋಲ್ವ? ಅನ್ನೋ ಅನೇಕ ವಿಷಾದನೀಯ ಪ್ರಶ್ನೆಗಳು ಮನಸ್ಸಿನಲ್ಲಿದ್ದವು. ಜೀವನ ಅನ್ನೋದು ಅಂದುಕೊಂಡರೆ ಸಿರಿಯಸ್ ಇಲ್ಲ ಅಂದ್ರೆ ಜಾಲಿ. ಅಂತಹ ಜಾಲಿಯಾದ ಒಂದು ಸನ್ನಿವೇಶ ಅಂತಹ ಕಷ್ಟದ ದಿನದಲ್ಲಿ ನಡೆದಿತ್ತು. 


ಕೆಲಸ ಹುಡುಕಿ ನಾನು ಹೋಗುತ್ತಿದ್ದ ಜಾಗಗಳೆಲ್ಲ ಅಲ್ಟ್ರ ಮಾಡರ್ನ್.  ಬಹು ಮಹಡಿಯ ಕಟ್ಟಡಗಳು, ವಿವಿಧ ಅಲಂಕಾರಿಕ ಉದ್ಯನವನಗಳು. ಗಾಜಿನಿಂದ ಮಾಡಿದ ಕಲಾಕೃತಿಗಳು. ಅದೊಂದು ವಿಸ್ಮಯ ಲೋಕ ಬಿಡಿ. ಇಂತಹ ವಿಸ್ಮಯ ಲೋಕದಲ್ಲೂ ಒಂದು ಕೊರತೆಯಿತ್ತು ಅಂದ್ರೆ ನಂಬ್ತೀರಾ? ಹೌದು ಇತ್ತು. ಅದು ಸುಲಭ ಶೌಚಲಯ. ಸಾರ್ವಜನಿಕರಿಗೆ ನೆರವಾಗಬಲ್ಲ ಒಂದೇ ಒಂದು ಪಬ್ಲಿಕ್ ಟಾಯ್ಲೆಟ್ ಅಲ್ಲಿರಲಿಲ್ಲ ಅನ್ನೋದೇ ಅಶ್ಚರ್ಯ. ಅಲ್ಲೇ ಏನು, ಬೆಂಗಳೂರಿನ ಎಷ್ಟೊ ಪ್ರದೇಶಗಳಲ್ಲಿ ಅದರ ಕೊರತೆ ಇದೆ. ಇನ್ನೂ ಕೆಲವೆಡೆ ಇದ್ರೂ ಅವಕ್ಕೆ ಬೇಗ ಜಡಿದು ಉಪಯೋಗಕ್ಕೆ ಬಾರದ ಹಾಗೆ ಇಟ್ಟಿರ್ತಾರೆ. ನನ್ನ ಕರ್ಮಕ್ಕೋ ಏನೋ ಆವತ್ತು ನನ್ನ ವೈರಿಯ ರೂಪದಲ್ಲಿ ನನಗೆ ನಿಸರ್ಗದ ಕರೆ ಬಂದಿತ್ತು (ಮಕ್ಕಳ ಭಾಷೇಲಿ ಸೂಸು). ಎಲ್ಲಿ ನೋಡಿದರೂ ಜನಜಂಗುಳಿ. ಸುಮಾರು ೧ ಕಿ. ಮೀ ನಡೆದರೂ ಒಂದೇ ಒಂದು ಶೌಚಾಲಯ ಸಿಗಲಿಲ್ಲ. ನನ್ನ ಮಿತ್ರನದೂ ಅದೇ ಕಥೆ. ಓಯಾಸಿಸ್ ನಲ್ಲಿ ನೀರು ಹುಡುಕೋದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ನಮ್ಮದಾಗಿತ್ತು. ಕೊನೆಗೂ ಒಂದು ಯೋಚನೆ ತಲೆಗೆ ಹೊಳೀತು. ಕಣ್ಣ ಮುಂದೆ ಲೀಲಾ ಪ್ಯಾಲೇಸ್ ಕಂಡಿತ್ತು. ಅದ್ಯಾವಾಗಲೋ ಒಮ್ಮೆ ಒಳಗೆ ಹೋಗಿದ್ದ ನೆನಪಿತ್ತು. ಕ್ಲಬ್ ಮಹಿಂದ್ರ ಮಳಿಗೆಗೆ ೨ ವರ್ಷದ ಹಿಂದೆ ನಾನು ನನ್ನ ಅಣ್ಣನ ಜೊತೆ ಅಲ್ಲಿ ಹೋಗಿದ್ದೆ. ಇವತ್ತು ಒಳಗೆ ಹೋಗೋಕೆ ಯಾವ ಕಾರಣವು ಇರಲಿಲ್ಲ. ಆದ್ರೆ ಸಮಸ್ಯೆ ಮಾತ್ರ ಇತ್ತು. ನನ್ನ ಮಿತ್ರ ಬೇರೆ ನನ್ನನ್ನ ಹೆದರಿಸುತ್ತಿದ್ದ. "ಲೇ ಸಿಕ್ಕು ಬಿದ್ರೆ ಒದೆ ಗ್ಯಾರಂಟಿ". 'ಒಂದೆರಡು ಒದೆ ತಿಂದರು ಚಿಂತೆಯಿಲ್ಲ ಒಳಗೆ ಹೋಗಿ ಕಾರ್ಯಕ್ರಮ ಕೊಡಲೇಬೇಕು'  ಅನ್ನೋದು ನನ್ನ ವಾದವಾಗಿತ್ತು. ಕೊನೆಗೂ ಬೇಟೆಗಾರರ ಹಾಗೆ ಒಳಗೆ ನುಗ್ಗಿದ್ವಿ. ರಿಸೆಪ್ಶನ್ ಹತ್ರ ಹೊಗಿ, "ಕ್ಲಬ್ ಮಹಿಂದ್ರ ಆಫೀಸ್ ಎಲ್ಲಿದೆ?" ಅಂದೆ. ಬಳುಕುತ್ತ ಕೌಂಟರಿನಲ್ಲಿ ನಿಂತಿದ್ದ ಆ ಹುಡುಗಿ "ಸೆಕೆಂಡ್ ಫ್ಲೋರ್ ರೈಟ್ ಸೈಡ್ ನಲ್ಲಿ ಇದೆ. ಅಷ್ಟು ಕೇಳಿದ್ದೆ ತಡ, ನಾಗಾಲೋಟದಿಂದ ೨ನೇ ಮಹಡಿ ಹತ್ತಿ, ಅಲ್ಲೇ ಇದ್ದ ಐಶಾರಾಮಿ ಶೌಚಾಲಯದಲ್ಲಿ ದೀರ್ಘ ಉಸಿರು ಬಿಟ್ಟೆ. ಎಲ್ಲ ಮುಗಿಸಿ ಆಚೆ ಬರೋವಾಗ ನನ್ನ ಫ್ರೆಂಡ್ ಮತ್ತು ನಾನು ಸೇರಿ, ನಾನು ಮಾಡಿದ ಪರಾಕ್ರಮ ನೆನೆಸಿಕೊಂಡು ನಕ್ಕು ಮುಂದೆ ಸಾಗಿದ್ವಿ.


ಇದಾದ ನಂತರ ಬೆಂಗಳೂರಿನಲ್ಲಿ ಸುಲಭ ಶೌಚಾಲಯ ಇಲ್ಲದಿದ್ರು, ವಿಪರೀತ ಪರಿಸ್ಥಿಯಲ್ಲಿ ಹೇಗೆ ನಿಭಾಯಿಸಬೇಕು ಅನ್ನೋದು ಅರಿವಾಗಿತ್ತು. ಈಗ್ಲೂ ಅಷ್ಟೇ, ವಿಧಿ ಏನಾದ್ರೂ ಈ ಥರ ಪರೀಕ್ಷೆ ಇಟ್ರೆ, ಟಾಯ್ಲೆಟ್ ಬದಲು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹುಡುಕೋದು ಕಷ್ಟಾನಾ?


ಹಾಗಂತ ಬರೀ ಪುಕಸಟ್ಟೆ ಪುರಾಣ ಕೇಳೋದು ಅನ್ತಲ್ಲ. ಕೆಲವೊಮ್ಮೆ ೧ ರೂಪಾಯಿಗೆ ಆಗಬೇಕಿರೋ ಕೆಲಸಕ್ಕೆ ೨೦-೩೦ ರೂಪಾಯಿ ಕೊಟ್ಟಿದ್ದೂ ಇದೆ. ಅದರಲ್ಲಿ ಕಾಫಿ ಡೇ ಸಮೋಸ ೨೦ ರೋಪಯಿ. ಅಡೆಯಾರ್ ಭವನ್ ದ ಭೇಲ್ - ೪೦ ರೋಪಯಿ. ಕೊನೆಗೆ ಶಾಂತಿಸಾಗರದ ಚಹಾ ೧ ರೂಪಾಯಿ. ದೇವರಾಣೆ ಇವೆಲ್ಲ ತಿನ್ನಬೇಕು ಅಂತ ಹೋಗಿ ತಿಂದಿದ್ದಲ್ಲ ರೀ..



Wednesday, February 13, 2013

ಪ್ರೀತಿ ಅನಂತ

                ಮೀಸೆ ಆಗತಾನೆ ಚಿಗುರಿದ್ದ ದಿನಗಳವು. ಕನಸು ಕಟ್ಟಿಕೊಂಡು ಅದರಲ್ಲಿ ಮೆರೆಯೋದೆ ಆಗಿದ್ದ ಮುಖ್ಯ ಕೆಲಸ. ಕಂಡ ಎಸ್ಟೋ ಕನಸುಗಳಲ್ಲಿ 'ಗರ್ಲ್ ಫ್ರೆಂಡ್ ' ಕೂಡ ಒಂದು. ಬಾಲ್ಯದಲ್ಲಿ ಓದಿದ್ದು ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ನಂ ೧. ಹೆಸರು ನೋಡೇ ನೀವು ಊಹೆ ಮಾಡಬಹುದು ಅಲ್ಲಿ ಬರೀ ಗಂಡು ಹುಡುಗರದ್ದೆ ದರ್ಬಾರು. ಚಿಕ್ಕ ನಾಟಕದಿಂದ ಹಿಡಿದು ಗ್ರೂಪ್ ಡಾನ್ಸ್ ವರೆಗೂ ಎಲ್ಲ ಐಟಂನಲ್ಲೂ ಕೂಡ ಹುಡುಗಿಯರ ರೂಪದಲ್ಲಿ ಹುಡುಗರು ಇರುತ್ತಿದ್ದರು. ಹೈಸ್ಕೂಲ್ ಬರೋ ವೇಳೆಗೆ ಕೋ-ಎಜುಕೇಶನ್ ಭಾಗ್ಯ ಸಿಕ್ಕಿತ್ತು. ನಾವೋ ಸಿಕ್ಕಾಪಟ್ಟೆ ಕ್ರಿಯೇಟಿವ್, ನಮ್ಮ ಕ್ರಿಯಾಶೀಲತೆಯಿಂದ ಕೆಲವು ಹುಡುಗಿಯರನ್ನ ಇಂಪ್ರೆಸ್ ಮಾಡಿದ್ವಿ. ಸುಂದರವಾಗಿರೊ ಹುಡುಗಿ ಜೊತೆ ೧೦ ನಿಮಿಷ ಮಾತಾಡಿದ್ರೂ ಸಾಕು ಅದೊಂದು ದೊಡ್ಡ ಸಾಧನೆ 'ಆ ಕಾಲಕ್ಕೆ'. small town mentality ಅನ್ನಿ. ಕಾಲೇಜ್ ಸೇರೋ ಹೊತ್ತಿಗೆ ಸ್ವಲ್ಪ ಮಾತು, ನಡೆ, ನುಡಿ ಎಲ್ಲ ಕಲಿತಾಗಿತ್ತು. ಮೀಸೆ ಸ್ವಲ್ಪ ಕಾಣೋ ಲೆವೆಲ್ಲಿಗೆ ಬೆಳೆದಾಗ ಇನ್ನಷ್ಟು ವಿಚಿತ್ರ ಅನುಭವಗಳು. ಸುಂದರವಾಗಿರೋ ಹುಡುಗಿ ನೋಡಿದ ತಕ್ಷಣ, ಮಾಡುವೆ ಎಲಿಜಿಬಿಲಿಟಿ ಗೆ ಇನ್ನೆಷ್ಟು ದಿನಗಳು ಬಾಕಿ ಇವೆ ಅನ್ನೋ ಲೆಕ್ಕಾಚಾರ.

          ಕೆಲವು ಫ್ರೆಂಡ್ಸ್ ಗೆ ಗರ್ಲ್ ಫ್ರೆಂಡ್ ಇದ್ರು. ಇನ್ನೂ ಕೆಲವರು ಹುಡುಕಾಟದಲ್ಲಿ ಇದ್ದರು. ಒಂದು ಜೀನ್ಸ್ ಪ್ಯಾಂಟ್, ಜೀನ್ಸ್ ಜಾಕೆಟ್, ಒಂದು ಬೈಕ್, ಹಾಗು ಒಂದಿಷ್ಟು ಲುಕ್ಸ್, ಇದೆಲ್ಲ ಇದ್ದವರಿಗೆ ಹುಡುಗಿ ಸಿಗೋದು ಕಷ್ಟಾನಾ? ಅನ್ನೋದು ಗರ್ಲ್ ಫ್ರೆಂಡ್ ಇಲ್ಲದವರ ಗೋಳು. ಇಷ್ಟೆಲ್ಲಾ ಇದ್ದು ಗರ್ಲ್ ಫ್ರೆಂಡ್ ಇಲ್ಲದೋರು ವೆಸ್ಟ್ ಬಾಡಿಗಳು ಅನ್ನೋದು ಕೂಡ ಅವರ ವೇದಾಂತ. ನನಗಿದ್ದದ್ದು ಒಂದು ಸೈಕಲ್, ಓವರ್ ಸೈಜ್ ಶರ್ಟ್, ಫಾರ್ಮಲ್ ಪ್ಯಾಂಟ್, ದೃಷ್ಟಿ ಬೋಟ್ಟಿನ ಥರ ಸ್ಪೋರ್ಟ್ ಶೂಸ್. ಸೈಕಲ್ ಮೇಲೆ ಬಂದು ಅಂಬರೀಷಣ್ಣ ಕರೆದರೆನೇ(ಯಾಕೆ ಬುಲ್ಬುಲ್ ಮಾತಡಕಿಲ್ವ ?) ಮಾತಾಡದೇ ಇರೋರು ನಮ್ ಜೊತೆ ಹೇಗೆ ಮಾತಾಡ್ಯಾರು?.

           ಒಂದು ಹುಡುಗೀನ ನೋಡಿದಾಗ love at first site ಆಗೋದು. ಆದ್ರೆ ಧೈರ್ಯ ಸಾಲದೇನೋ ಅಥವಾ ಅದು ಆಲ್ರೆಡಿ ರೆಸೆರ್ವಡ್ ಸೀಟ್ ಅಂತಲೋ ಹಿಂದೆ ಸರಿದು, ಅದು ಲವ್ವೇ ಅಲ್ಲ ಅನ್ನೋ ನಿರ್ಧಾರಕ್ಕೆ ಬರೋದು. ಆದ್ರೆ ನಿಜವಾದ ಪ್ರೀತಿ ಅನ್ನೋದು ಶುರು ಆಗೋದು ಗೊತ್ತೇ ಆಗೋಲ್ಲ. ಯೋಚನೆ ಮಾಡೋಕೂ ಸಮಯ ಕೊಡದೇ ಇರೋವಷ್ಟು ಫಾಸ್ಟ್ ಅದು. ಪ್ರೀತಿ ಮಾಡೋಕೆ ಕಾರಣ ಇರಲ್ಲ. ನನಗೂ ಒಂದು ಸಲ ಈ ತರಹದ true love ೨ ವರ್ಷದ ಹಿಂದೆ ಆಯಿತು. ಒಂದೇ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿ ಹೋಗಿದ್ದೆ ನಾನು. ಹೊಸ ಕಲ್ಪನೆ, ಹೊಸ ದಾರಿ, ಹೊಸ ದಿಗಂತಕ್ಕೆ ಮನಸು ಲಗ್ಗೆ ಹಾಕಿದ ಕ್ಷಣ ಅದು. "ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸು" ನನಗೆ ಗೊತ್ತಿಲ್ಲದೇ ನನ್ನ ಮನಸಿನ ಟೇಪ್ ರೆಕಾರ್ಡರ್ ನಲ್ಲಿ ಈ ಹಾಡು ಪುನ: ಪುನ: ಕೇಳಿ ಬಂತು. ಜೀವನ ಮುಗಿದು ಹೋಗೊವಷ್ಟರಲ್ಲಿ ಇನ್ನಷ್ಟು ಮಧುರ ನೆನಪುಗಳ ಮೂಟೆ ಕಟ್ಟಿಕೊಳ್ಳೋ ಮನಸಾಯಿತು. ಕಣ್ಣು ಮುಚ್ಚಿದರೂ, ಬಿಚ್ಚಿದರೂ ಕಾಣುವ ಅವಳ ನೆನಪೇ ನನ್ನ ಪ್ರೀತಿಗೆ ಸ್ಫೂರ್ತಿ. ನನ್ನ ನೆನಪಿನ ಬಾಂದಳದ ಬಿದಿಗೆ ಚಂದ್ರಮ, ನನ್ನ ಜೀವನದ ಖಾಲಿ ಹಾಳೆಯ ಮೇಲೆ ಬರೆದ ಸುಂದರ ಪದ್ಯ, ನನ್ನ ಯೋಚನೆಗಳ ಸೂತ್ರಧಾರಿ.. ನಿನಗೆ ನಾ ಅಭಾರಿ... ನನ್ನ ಪ್ರೀತಿ ಅನಂತ...

          ನನ್ನ ಪ್ರೀತಿಯ ಮಡದಿ - "ಪ್ರೇಮಿಗಳ ದಿನದ ಶುಭಾಶಯಗಳು"...

               

Sunday, December 23, 2012

ಆಯ್ದ ಕವನಗಳು



ಕಲ್ಪನೆಯ ದಾರಿ


ದೇಹಕ್ಕೊಂದು ಮನಸು... ಮನಸಿಗೆ ಹಲವು ಕನಸು...

ಕನಸಿಗೊಂದು ಕಲ್ಪನೆ.... ಕಲ್ಪನೆಗೊಂದು ದಾರಿ....

ಆ ದಾರಿಯ ಪಯಣಿಗ ನಾ...

ನನ್ನ ಕಲ್ಪನೆಗೆ ಕೊನೆಯಿಲ್ಲ... ಕನಸಿಗೆ, ಅಂತ್ಯವಿಲ್ಲ.

                        

ನೆನಪು ಸತ್ತಾಗ
                                                           
ಮನುಷ್ಯ ಸತ್ತಾಗ... ನೆನಪಾಗಿ ಉಳಿಯುತ್ತಾನೆ.

ಅದೇ ನೆನಪು ಸತ್ತಾಗ?

ತುಂಬಾ ಯೋಚಿಸಬೇಡಿ, ನೆನಪು ಸಾಯೋದಿಲ್ಲ...







ಆಸೆಗಳು

ಆಸೆಗಳ ಗಂಟನ್ನು ಹೊತ್ತು ಮಾರುತ್ತಿರುವ ವರ್ತಕ ನಾನು

ಅದೇ ಆಸೆಗಳ ಗಂಟಲ್ಲಿ ಒಂದನ್ನೂ ನಾ ಕೊಳ್ಳಲಾರೆ.

ಮಾರುವುದರಲ್ಲಿ ಇರೋ ಲಾಭ ಕೊಳ್ಳೋದ್ರಲ್ಲಿ ಇದೆಯಾ?

                        


                                                                 

ನಾನ್ಯಾರು?
                   
ನಾನ್ಯಾರು ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ.

ನಾನೇನು ಎನ್ನುವುದು ನನಗಿನ್ನೂ ತಿಳಿದಿಲ್ಲ.

ಜೀವನ ಪಯಣ ನಡೆಯುತಿದೆ ಈ ಎರಡು ಉತ್ತರಗಳ ಹುಡುಕಾಟದಲಿ.

Saturday, November 17, 2012

ಕಸ = ಕಸಿವಿಸಿ


ಅವತ್ತೊಂದು ದಿನ ಯಶವಂತಪುರ ರೇಲ್ವೆ ಸ್ಟೇಷನ್ ಗೆ ಯಾರೋ ನೆಂಟರನ್ನ ಕರೆದುಕೊಂಡು ಬರೋಕೆ ಹೋಗಿದ್ದೆ. ಸಿಕ್ಕಾಪಟ್ಟೆ ಚಳಿ, ಜೊತೆಗೆ ಒಂದಿಷ್ಟು ಜಿನುಗೋ ಮಳೆ ಹನಿ. ಅದ್ಭುತ ವಾತಾವರಣ. ಟ್ರೇನ್ ಬರೋಕೆ ಇನ್ನು 30 ನಿಮಿಷ ಇತ್ತು. ಒಂದು ಕಪ್ ಟೀ ಹೀರಿಬಿಡೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಟೀ ಸ್ಟಾಲ್ ಗೆ ಹೋದೆ. ಚಹಾ ಕುಡಿದ ಮೇಲೆ ಕಪ್ ಎಸೆಯೋಕೆ ಕಸದ ಬುಟ್ಟಿ  ಹುಡುಕಿದೆ. ಆದ್ರೆ ಬುಟ್ಟಿ ಅಲ್ಲಿರಲಿಲ್ಲ. ಅಂಗಡಿಯವನಿಗೆ ಕೇಳ್ದೆ 'ಕಸದ ಬುಟ್ಟಿ ಎಲ್ಲಪ್ಪ?'. ಅವನು ಕೊಟ್ಟ ಉತ್ತರ ಕೇಳಿ ಕೋಪ ನೆತ್ತಿಗೇರಿತು. 'ಅಲ್ಲೇ ಎಲ್ಲಾದರು ಹಾಕಿ, ಬೇರೆಯವರು ಅಲ್ಲೇ ಹಾಕಿದ್ದರೆ. ನಿಮಗೆ ಅಂತ ಕಸದ ಬುಟ್ಟಿ ತಂದು ಕೊಡಲೇನು?' ಈ ಬೇಜವಾಬ್ದಾರಿಯ ಮಾತಿಗೆ ಉತ್ತರಿಸೋ ತಾಳ್ಮೆ ನನಗಿರಲಿಲ್ಲ. 
30 ನಿಮಿಷದ ಹಿಂದೆ, ಅದೇ ಪ್ಲಾಟ್ಫಾರ್ಮ್ ಸ್ವಚ್ಛ ಮಾಡೋಕೆ ಅಂತ ಒಬ್ಬಳು ವೃದ್ಧೆ ಬಂದಿದ್ದಳು. ಮೈಮೇಲೆಲ್ಲ ನೆರಿಗೆಗಳು. ಆ ಚಳಿಯಲ್ಲಿ ಹರಿದು ಹೋದ ಒಂದು ಸ್ವೆಟರ್, ಕಿವಿಗೆ ಒಂದು ಬಟ್ಟೆ, ಕೈಯಲ್ಲಿ ಒಂದು ಪೊರಕೆ, ಕಾಲಲ್ಲಿ ಹಳೆ ಹವಾಯಿ ಸ್ಲಿಪ್ಪರ್ ಅದಕ್ಕೂ ದಾರದಿಂದ ಕಟ್ಟಿದ ಉಂಗುಷ್ಟ. ತೀರ ಚಿಂತಾಜನಕ ಸ್ಥಿತಿಯಲ್ಲಿ ಇದ್ದಳು ಆ ಅಜ್ಜಿ. ಟ್ರೇನ್ ಸ್ಟೇಶನ್ನಲ್ಲಿ ನಿಂತಾಗ ಶೌಚಾಲಯ ಉಪಯೋಗಿಸಬೇಡಿ ಅಂತ ಎಷ್ಟೇ ಬಡ್ಕೊಂಡ್ರು ನಮ್ಮ ಜನಕ್ಕೆ ಅರ್ಥ ಆಗೋಲ್ಲ. ಟ್ರೇನ್ ನಿಂತಾಗ ಮಾಡಿರೋ ಆ  ಪಾಪ ತೊಳೆಯೋಕೆ ಆ ಅಜ್ಜಿ ತನ್ನ ಕೈ ಉಪಯೋಗಿಸ್ತಾ ಇದ್ದಳು. ಅದೇನು ಅವಳ ಕರ್ಮವೋ ಅಥವಾ ಮಾಡಿದವನ ಪಾಪದ ಕೊಡ ತುಂಬೋಕೆ ಭಗವಂತ ಆಡಿಸಿದ ಆಟವೋ, ಒಂದೂ ಗೊತ್ತಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ನೋಡಿದರೆ ಆಕೆ ಮೇಲೆ ಕನಿಕರ ಹುಟ್ಟೋದು ನಿಶ್ಚಿತ. ಅವಳು ಮಾಡೋ ಆ ಕೆಲಸಕ್ಕೆ ಅವಳಿಗೆ ಎಷ್ಟು ದುಡ್ಡು ಸಿಗುತ್ತೋ ಅದರ ನಾಲ್ಕು ಪಟ್ಟು ಪಾಪ ಅಲ್ಲಿ ಗಲೀಜು ಮಾಡಿದ ಪಾಪಿಗೆ ಸಿಗುತ್ತದೆ. ಈ ಪಾಪ ಪುಣ್ಯದ ಲೆಕ್ಕದಲ್ಲಿ ನಮ್ಮ ದೇಶದ ಸೌಂದರ್ಯ, ಅದರ ಪ್ರತಿಷ್ಠೆ ಎಲ್ಲ ಮೂಲೆಗುಂಪಾಗಿ, ಭಾರತೀಯರು ಅಂದ್ರೆ ಕೊಳಕರು, ಆ ದೇಶದ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋದು ಹೊರದೇಶದವರ ವಾದವಾದರೆ. ಇನ್ನು ಭಾರತೆ ಮಾತೆಯ ಮೊಮ್ಮಕ್ಕಳಾದ ನಮ್ಮ ಯುವಕರು ಈ ದೇಶಕ್ಕೆ ಭವಿಷ್ಯ ಇಲ್ಲ ಅನ್ನೋದು ಇನ್ನೂ ನಾಚಿಕೆಗೇಡು ಪಡುವಂತಹ ವಿಷಯ.
ನಾನೊಬ್ಬನೇ ಏನು ತಾನೇ ಮಾಡೋಕೆ ಆಗುತ್ತೆ ಅನ್ನೋದು ಕೆಲವರ ಅಂಬೋಣ. ಇಲ್ಲಿ ಶಿವ್ ಖೇರಾ ಹೇಳಿರೋ ಒಂದು ಮಾತು ನೆನಪಾಗುತ್ತದೆ. 'if you are not part of the solution then you are part of the problem'. ದೇಶ ನನ್ನದು ಅದು ಶುದ್ಧವಾಗಿರಬೇಕು. ದಿನ ಬೆಳಿಗ್ಗೆ ಎದ್ದು ಪೊರಕೆ ಹಿಡಿದು ದೇಶ ಗುಡಿಸೋದು ಕಷ್ಟ, ಆದ್ರೆ ನಮ್ಮ ಕೈಲಾದಷ್ಟು ನಮ್ಮನ್ನು ನಾವು ತಿದ್ದಿಕೊಂದ್ರೆ ಅದೇ ದೊಡ್ಡ ಉಪಕಾರ.
ಮೊನ್ನೆ ದೀಪಾವಳಿ ಆಯಿತು. ಎಲ್ಲರೂ ತಂಡ ತಂಡವಾಗಿ ರೋಡಿಗಿಳಿದು ಪಟಾಕಿ ಹೊಡೆದರು. ಅದು ಸಂಭ್ರಮದ ಹಬ್ಬ. ರಾತ್ರಿ ಎಲ್ಲ ಪಟಾಕಿ ಹೊಡೆದ ಜನ ಎದ್ದಿದ್ದು ಬೆಳಿಗ್ಗೆ 7 ಗಂಟೆಗೆ. ಆದ್ರೆ ಅವರೆಲ್ಲ ಏಳೋ ಮೊದಲು, ಪೊರಕೆ ಹಿಡಿದ ಅದೆಷ್ಟೋ ಕೈಗಳು ಅವರನ್ನ ಬೈಕೊಂಡು ರೋಡು ಸ್ವಚ್ಛಗೊಳಿಸಿ ಮರೆಯಾದವು. ಪಟಾಕಿ ಹಾರಿಸೋ ಜನರಲ್ಲಿ ಒಬ್ಬರಾದರು ಆ ಅವಶೇಷಗಳ ಬಗ್ಗೆ ಯೋಚನೆ ಮಾಡಿದ್ರ? ಖಂಡಿತ ಇಲ್ಲ. ಗೋ ಗ್ರೀನ್ ಅಂತ ಬಟ್ಟೆ ಹಾಕಿಕೊಂಡು ಒಂದು ದಿನವಿಡೀ ಫೋಟೋ ತೆಗೆದು ಫೆಸಬುಕ್ ಗೆ ಹಾಕಿಕೊಳ್ಳೋ ಯುವಕರೇ ಜಾಸ್ತಿ. ಕ್ರಾಂತಿ ಅನ್ನೋದು ಒಂದು ದಿನ ಬಂದು ಹೊಗೊದಲ್ಲ, ಅದು ನಿರಂತರ. 
ಇದೆಲ್ಲ ನೋಡುತ್ತಿದ್ದರೆ, ಆ ಬ್ರಿಟಿಷರ ದಬ್ಬಾಳಿಕೆಯ ದಿನಗಳೇ ನಮ್ಮಲ್ಲಿ ದೇಶಭಕ್ತಿಯನ್ನು, ಒಗ್ಗಟ್ಟನ್ನು ಖಾಯಂಗೊಳಿಸಿದ್ದವು. ಜಲ, ವಾಯು, ಭೂಮಿ ಜೊತೆ ನಮ್ಮ ವೈಚಾರಿಕ ಪ್ರಜ್ಞೆ ಕೂಡ ಮಲಿನ ಆಗಿರೋದು ದುರದೃಷ್ಟಕರ. ಇನ್ನೊಮ್ಮೆ ಬೇಕಾಬಿಟ್ಟಿ ಕಸ ರೋಡಿನಲ್ಲಿ ಹಾಕೋವಾಗ ಮೇಲೆ ಹೇಳಿರೋ ಆ ಅಜ್ಜಿಯ ಮುಖ ಒಮ್ಮೆ ನೆನೆಪಿಸಿಕೊಳ್ಳಿ. 
ಚಿತ್ರಕೃಪೆ: ದಿ ಹಿಂದು ಪತ್ರಿಕೆ

Wednesday, November 14, 2012

ಪ್ರೀತಿ

ಪ್ರೀತಿ ಅನ್ನೋದು ಹೇಗಿರುತ್ತೆ ಅನ್ನೋದರ ಬಗ್ಗೆ ಕಲ್ಪನೆ ಇದ್ದದ್ದೇ ಬೇರೆ, ಆದರೆ ಪ್ರೀತಿಯ ಬಗ್ಗೆ ತಿಳಿದಾಗ ಆಧ ಅನುಭವವೇ ಬೇರೆ. ಪ್ರೀತಿ ಎನ್ನುವ ಆ ಮರಿಜಿಂಕೆ ನನ್ನ ಮನದಲ್ಲಿ ನಲಿದಾಡಿದ್ದು ನಾ ಕಂಡ ಕ್ಷಣ ನನ್ನಲ್ಲದ ಬದಲಾವಣೆ ಹೇಳತೀರದು. ನನ್ನದೇ ಲೋಕ ಸೃಷ್ಟಿಸಿ ಅಲ್ಲಿಗೆ ಯಾರೂ ಬರದ ಹಾಗೆ ಬದುಕು ನಡೆದಿತ್ತು. ಎದೆಯಾಳದ ಮೂಲೆಯೊಂದರಲ್ಲಿ ಇಟ್ಟಿದ್ದ ಚಿಕ್ಕದೊಂದು ಸಂದೂಕದೊಳಗೆ ಅಡಗಿಸಿದ್ದ ನನ್ನ ಹಲವಾರು ಕನಸುಗಳಿಗೆ ಬೀಗ ಹಾಕಿಟ್ಟಿದ್ದೆ. ನನ್ನ ಹೊರತು ಅದರ ಒಳಗಿನ ರಹಸ್ಯಗಳು ಬೇರ್ಯಾರಿಗೂ ಗೊತ್ತಿರಲಿಲ್ಲ. ಆ ಸಂದೂಕಕ್ಕೆ ಯಾರ ಕೈ ತಲುಪಬಾರದೆಂದು ಅದಕ್ಕೊಂದು ಬೀಗ ಹಾಕಿ, ಬೀಗದ ಕೈ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಬಚ್ಚಿಟ್ಟು ಮರೆತು ಹೋಗಿದ್ದೆ. ನನ್ನ ಕಣ್ಣಿಗೆ ಮಾತ್ರ ಕಾಣಿಸುವ ಆ ಕೀಲಿಯ ಕಿಂಡಿಯ ಒಳಗೆ ಇಣುಕಿ ನೋಡಿ, ಒಂದೊಂದೇ ಕನಸನ್ನು ಹೊರಗೆ ತೆಗೆದು, ಅದನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿದ್ದಾಗಲೇ ನೀನನಗೆ ಸಿಕ್ಕೆ. ಸುಪ್ತ ಮನಸ್ಸಿನಲ್ಲಿ ಅಡಗಿರೋ ಆ ಕನಸುಗಳ ಸಂದೂಕದ ಕೀಲಿ ಮುರಿದು ಚೂರಾಗಲು ನಿನ್ನ ಒಂದು ನಗು ಸಾಕಾಗಿತ್ತು. ತೆರೆದಿದ್ದ ಆ ಪೆಟ್ಟಿಗೆಗೆ ನನ್ನ ಅಪ್ಪಣೆ ಇಲ್ಲದೆ ನೀ ಕೈ ಹಾಕಿದೆ. ನಿನಗೆ ಇಷ್ಟವಾಗದ ಅನೇಕ ಕನಸುಗಳನ್ನು ನಾನು ಅದರಿಂದ ಆಚೆ ಹಾಕಿದೆ. ನಿನಗೆ ಇಷ್ಟವಾದ ಅದೆಷ್ಟೋ ಕನಸುಗಳನ್ನು ಅದಕ್ಕೆ ನೀ ತುಂಬಿದೆ. ಮೊದಲು ಇದ್ದ ಪೆಟ್ಟಿಗೆಗಿಂತ ಈಗಿನ ಪೆಟ್ಟಿಗೆಯ ಬಗ್ಗೆ ನನಗೆ ಒಲವು ಮೂಡಿತು. 
ಯಾವ ಕನಸು, ಯಾರ ಕನಸು ಅನ್ನೋದನ್ನ ವಿಂಗಡಿಸಲಾರದಷ್ಟು ಅವುಗಳು ಬೆರೆತು ಹೋದವು. ಈಗ ಅವೇನೇಯಿದ್ದರೂ ನಮ್ಮ ಕನಸುಗಳು. ನಿನ್ನ ಪ್ರೀತಿಯ ಬಲವೊಂದಿದ್ದರೆ ಎಲ್ಲ ಕನಸುಗಳಿಗೆ ಒಂದು ದಿನ ಸಾಕಾರ ರೂಪ ಕೊಡುವುದು ಖಂಡಿತ. ನನ್ನನ್ನು ಪ್ರತಿದಿನವೂ, ಪ್ರತಿಕ್ಷಣವೂ  ಹಿಂಬಾಲಿಸುತ್ತಿರುವ ಓ ನನ್ನ ಪ್ರೀತಿಯೇ ನಿನಗೆ ನಾನು ಚಿರಋಣಿ. ಓ ನನ್ನ ಒಲವೆ, ಓ ಜೀವವೇ ಐ ಲವ್ ಯು. ನೀನು ನಾನು ಬೇರೆಯೇ ?  


Tuesday, November 13, 2012

ಜೀವನ ಗೆದ್ದವರು

ಮೊನ್ನೆ ಗುರುವಾರ ಆಫೀಸನಲ್ಲಿ ಕುಳಿತಿದ್ದೆ. ನನಗೆ ಪರಿಚಯವಿಲ್ಲದ ಯಾರೋ ಒಬ್ಬ ಹುಡುಗ ಫೋನ್ ಮಡಿದ. "ವಿಷಯ ಏನು?" ಅಂದೆ. ಅವನ ಜೊತೆ ಮಾತಾಡಿದ ಮೇಲೆ ವಿಷಯ ತಿಳಿಯಿತು. ಭಾನುವಾರ ನಡೆಯಲಿರೋ ಒಂದು ಕಾರ್ಯಕ್ರಮಕ್ಕೆ ನನ್ನನ್ನು ನಿರ್ಣಾನಾಗಿ ಆಹ್ವಾನಿಸಿದರು. ಚಿಕ್ಕ ಮಕ್ಕಳು ಅಭಿನಯಿಸುವ ನಾಟಕದ ಸ್ಪರ್ಧೆ ಅದು. ಯಾರನ್ನೋ judge ಮಾಡುವ ಅರ್ಹತೆ ನಾನಿನ್ನು ಘಳಿಸಿಲ್ಲ. ಆದರೂ ನನಗೆ ತಿಳಿದ ಮಟ್ಟಿಗೆ ಒಬ್ಬ ನೋಡುಗನಾಗಿ ತೀರ್ಮಾನ ಮಾಡಲು ಹೊರಟೆ ಅಲ್ಲದೆ ಚಿಕ್ಕ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ನನಗೆ ಅಲ್ಲಿಗೆ ಹೋಗೋ ತೀವ್ರ ಮನಸಾಯಿತು. ಕಾರಣವಿಷ್ಟೇ ಅವರು ಅನಾಥಾಶ್ರಮದ ಮಕ್ಕಳು.

ಭಾನುವಾರ ನನ್ನ ಇನ್ನೊಬ್ಬ ಮಿತ್ರನನ್ನ ಕರೆದುಕೊಂಡು ಆ ಕಾರ್ಯಕ್ರಮಕ್ಕೆ ಹೋದೆ. ಸುಮಾರು 500 ಹುಡುಗರು ನೆರೆದಿರೋ ಕಾರ್ಯಕ್ರಮ ಅದು. ನಾಟಕದ ಜೊತೆಗೆ ಇನ್ನೂ ಹಲವು ಸ್ಪರ್ಧೆಗಳು ಇದ್ದವು. ಫೇಸ್ ಪೇಂಟಿಂಗ್, ಸ್ಪೋರ್ಟ್ಸ್, ಪಾಟ್ ಮೇಕಿಂಗ್, ಡ್ರಾಯಿಂಗ್, ಪೇಂಟಿಂಗ್, ಒಂದೇ ಎರಡೇ. ನನಗೆ ಹೋದ ತಕ್ಷಣ ಒಂದು ರೂಮಿನಲ್ಲಿ ಕಾರ್ಯಕ್ರಮದ ಬಗ್ಗೆ ಒಬ್ಬ ಸ್ವಯಂ ಸೇವಕಿ ಹೇಳಿದಳು. ಹಾಗೆ ಅವರ ಹಿಂದಿನ ಹಾಗು ಅದರ ಹಿಂದಿನ ವರ್ಷದ ಫೋಟೋಗಳನ್ನು ತೋರಿಸಿದಳು. ನಾಟಕದ ಸ್ಪರ್ಧೆ ಶುರುವಾಗೋಕೆ ಇನ್ನು 1 ಗಂಟೆ ಇತ್ತು. ಆ ನಾಲ್ಕು ಗೋಡೆಗಳ ಮಧ್ಯ ಕೂಡೋ ಬದಲು ಅಕ್ಕ ಪಕ್ಕದಲಿ ನಡೆಯುತ್ತಿದ್ದ ಸ್ಪರ್ಧೆಗಳ ಮೇಲೆ ಕಣ್ಣು ಹಾಯಿಸೋ ಮನಸಾಯಿತು. ನಾನು ಮತ್ತು ನನ್ನ ಮಿತ್ರ ಎಲ್ಲ ಕೋಣೆಗಳಿಗೆ ಭೇಟಿ ಕೊಟ್ಟೆವು. ಒಂದೊಂದು ಕೋಣೆಯಲ್ಲೂ ನವ ಪ್ರತಿಭೆಗಳು, ನವ್ಯ ಯೋಚನೆಗಳು, ಅಭೂತಪೂರ್ವ ಕಲ್ಪನೆಗಳು. ಯಾವುದೋ ಸಾಗರದ ಮಧ್ಯ ನಿಂತ ಅನುಭವ. ಅವರಿಗೆಲ್ಲ ಇದ್ದ ಆ ಪ್ರತಿಭೆ ಅವರ ವಯಸ್ಸಿಗೆ ತಾಳೆಯಾಗುತ್ತಿರಲಿಲ್ಲ. ವಿಶ್ವ ಮಾನವ ಸಂದೇಶ ಸಾರುವ ಚಿತ್ರಗಳು. ಪಿಕ್ಸಾರ್ ಸಂಸ್ಥೆಯನ್ನೇ ಮೀರಿಸುವ ಕಲಾಕೃತಿಗಳು. ಕಣ್ಣು ಅನೇಕ ಬಣ್ಣಗಳಿಂದ ತುಂಬಿ ಹೋದವು.

ಇದೆಲ್ಲ ಮುಗಿಸುವಷ್ಟರಲ್ಲಿ ನಾಟಕದ ಸ್ಪರ್ಧೆ ಶುರುವಾಗಿದೆ ಅನ್ನೋ ಕರೆ ಬಂತು. ಸರಿ ಅಲ್ಲಿಗೆ ಹೊರಟೆ. ಒಟ್ಟು 8 ಚಿಕ್ಕ ನಾಟಕಗಳು. ಎಲ್ಲವೂ ಒಂದಕ್ಕಿಂತ ಒಂದು ಮೇಲು. ನನಗೆ ಅನುವು ಮಾಡಿದ್ದರೆ, ಎಲ್ಲರಿಗೂ ಮೊದಲ ಬಹುಮಾನ ಕೊಡುತ್ತಿದ್ದೆ. ಆದರೂ ಕೆಲವು ಸೂಕ್ಮಗಳನ್ನು ಗಮನಿಸಿ 1 ತಂಡಕ್ಕೆ ಮೊದಲ ಬಹುಮಾನ ಘೋಷಿಸಿದೆ. ಅನೇಕ ಯುತ್ ಫೆಸ್ಟ್ ಗಳಲ್ಲಿ, ಕಾಲೇಜ್ ಸ್ಪರ್ಧೆಗಳಲ್ಲಿ, ಗೆಲುವು ಸಿಗದೇ ಇದ್ದಾಗ ನಾನು ಕೂಡ ಮನಸ್ಸು ನೋಯಿಸಿಕೊಂಡಿದ್ದು ಇದೆ. ಆದ್ರೆ ಇವತ್ತಿನ ಆ ಮಕ್ಕಳನ್ನು ನೋಡಿದರೆ, ಗೆಲುವು ಸೋಲು ಎಲ್ಲವೂ ಒಂದೇ ತೆರನಾಗಿ ಸ್ವೀಕರಿಸುವ  ಮನೋಭಾವ.

ಯಾವುದಾದರು ಒಂದು ಮಗು ಮುಖ ಸಪ್ಪೆ ಮಾಡಿಕೊಂಡಿರುವ ದೃಶ್ಯ ಕಾಣಸಿಗಲಿಲ್ಲ. ನನ್ನ ಮಿತ್ರನಿಗೆ ಹೇಳಿದೆ 'ಈ ಮಕ್ಕಳನ್ನ ನೋಡ್ತಾ ಇದ್ರೆ, ಇವರು ಅನಾಥರು ಅಥವಾ ಇವರನ್ನು ಇವರ ಕಡೆಯವರು ದೂರಮಾಡಿರುವ ಬಗ್ಗೆ ಅಸಮಾಧಾನ ಯಾವುದು ಕಾಣುತ್ತಿಲ್ಲ. ಪರಿಸ್ಥಿತಿಯನ್ನು ಎದುರಿಸೋದು ಹೇಗೆ ಅನ್ನೋದು ಇವರನ್ನ ನೋಡಿ ಕಲೀಬೇಕು ಅನ್ನಿಸುತ್ತೆ' ಅಂದೆ.

'ನಿಜ' ಅಂದ ನನ್ನ ಮಿತ್ರ. ನೀವೇನಂತೀರಿ?

ವೀಕೆಂಡ್ ವರೈಟಿ

            ದೇವರು ಎಲ್ಲ ಕಡೆ ಇರೋಕೆ ಸಾಧ್ಯವಾಗಲ್ಲ ಅನ್ನೋ ಕಾರಣಕ್ಕೆ ತಾಯಿಯನ್ನ ಸೃಷ್ಟಿಸಿದ ಅನ್ನೋದು ನಮಗೆಲ್ಲ ಗೊತ್ತಿರೋ ಮಾತು. ಆದ್ರೆ ನನ್ನ ಪಾಲಿಗೆ ಆ ಅದೃಷ್ಟ ಡಬಲ್.  ತಂದೆ-ತಾಯಿ ಇಬ್ಬರೂ ನನ್ನ ಮೇಲಿಟ್ಟಿರೋ ಪ್ರೀತಿ ಅಂತಹದ್ದು. ಬರೀ ಕಣ್ಣು ನೋಡಿ ನನ್ನ ಮನಸ್ಥಿತಿ ಅರಿಯೋವಷ್ಟು ಮೇಧಾವಿಗಳು ಅವರು. ಕೆಲವೊಮ್ಮೆ ಬೇಜಾರು ಪಡುವಂತಹ ಸಂಗತಿಗಳು ನಡೆದರೂ ಅದ್ಯಾವುದು ಬಹಳ ಕಾಲ ನೆಲೆಯೂರಲ್ಲ. ನಾನೋ ಅಥವಾ ಅವರೋ, ಯಾರೋ ಒಬ್ಬರು ಆ ಬೇಜಾರಿಗೆ ಮರಣ ಬರೀತೀವಿ.
           ಇಡೀ ವಾರ ನನ್ನ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಬಹುಶಃ ನನಗೆ ಗೊತ್ತಿರೋದಿಲ್ಲ. ಮನೆ ಬೇಕಾಗೋ ಸಾಮಾನುಗಳಿಂದ ಹಿಡಿದು ನನ್ನ ಊಟ, ಬಟ್ಟೆ ಹೀಗೆ ಎಲ್ಲಾ ಭಾಗಗಳಲ್ಲೂ ಅವರು ತಮ್ಮ ಸಹಾಯ ತೋರುತ್ತಾರೆ. ಕೆಲವೊಮ್ಮೆ, ನಾನೆಲ್ಲಿ ತುಂಬಾ ಪರಾಧೀನನಾಗಿ ಬಿಡ್ತೇನೋ ಅನ್ನೋವಷ್ಟು ಅವರನ್ನು ಅವಲಂಬಿಸಿದ್ದೇನೆ. ಇನ್ನೂ ಕೆಲವೊಮ್ಮೆ ಕೋಪದಿಂದ 'ಇದೆಲ್ಲ ಮಾಡಬೇಡಿ ನೀವು, ನಾನೆಲ್ಲ ಮಾಡ್ಕೊತೀನಿ' ಅನ್ನೋ ಮಾತುಗಳೂ ಆಡಿದ್ದುಂಟು. ಅವರು ಮಾಡೋದು ಬಿಡೋಲ್ಲ, ನಾನು ಹೇಳೋದು ಬಿಡೋಲ್ಲ.
ಈ ವೀಕೆಂಡ್ ಬಂದ್ರೆ, ನನಗೆ ಮೂಡ ಇದ್ರೆ, ಅಡುಗೆ ಮನೆ ನಂದು. ಹೊಸರುಚಿ, ಅಭಿರುಚಿ ಅನ್ನೋ ಹೆಸರಲ್ಲಿ ಏನೇನೋ ಅಡುಗೆ ಮಾಡಿ ಅವರಿಗೆ ಊಟಕ್ಕೆ ಹಾಕೋದು ನನ್ನ ರೂಢಿ. ಬೆಳಿಗ್ಗೆ ತಿಂಡಿಯಿಂದ  ಹಿಡಿದು ರಾತ್ರಿ ಊಟದವರೆಗೂ ಏನಾದ್ರೂ ಹೊಸ ಪ್ರಾಯೋಗಿಕ ಅಡುಗೆ ಮಾಡಿ ಅವರನ್ನ ಕೂಡಿಸಿ ಊಟಕ್ಕೆ ಹಾಕೋದ್ರಲ್ಲಿ ಇರೋ ಸುಖ ಬೇರೆ ಯಾವುದರಲ್ಲಿ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿವರೆಗೂ ನನ್ನ ಊಟ, ಉಡುಗೆ, ತಿಂಡಿ ಎಲ್ಲದರ ಬಗ್ಗೆ ಅಷ್ಟು ಕಾಳಜಿವಹಿಸುವ ಅವರಿಗೆ, ಒಂದು ದಿನ ಮಾಡಿ ಹಾಕೋದ್ರಿಂದ ಅವರಿಗೂ ರೆಸ್ಟ್ ಸಿಗುತ್ತೆ. ಜೊತೆಗೆ ಮಗ ನಮ್ಮನ್ನ ಕೂಡಿಸಿ ಮಾಡಿ ಹಾಕಿದ ಅನ್ನೋ ಆ ತೃಪ್ತಿ ಇದೆಯಲ್ಲ ಅದು ಕೋಟಿ ಕೊಟ್ಟರು ಬಾರದು.
               ಮೊನ್ನೆ ಹೀಗೆ ಬಜ್ಜಿ ತಿನ್ನೋ ಆಸೆ ಆಯಿತು, ಒಳಗೆ ಹೋಗಿ ಹಿಟ್ಟು ಕಲಿಸಿ ಬಜ್ಜಿ ಮಾಡೇ ಬಿಟ್ಟೆ. ಜೊತೆಗೊಂದಿಷ್ಟು ಈರುಳ್ಳಿ, ಕೊತ್ತಂಬರಿ, ಕ್ಯಾರೆಟ್ ಹಾಗು ನಿಂಬೆ ಹಣ್ಣಿನ ಕೋಸಂಬರಿ ಮಾಡಿ, ಬಿಸಿ ಬಿಸಿ ಬಜ್ಜಿ ಜೊತೆ ಆ ಕೋಸಂಬರಿ ತಿಂದರೆ, ಏನ್ ಕೇಳ್ತೀರಾ ಆ ರುಚಿ. ಇಷ್ಟೆಲ್ಲಾ ಆಗಬೇಕಾದರೆ, ಅಮ್ಮ ಅಡುಗೆ ಮನೆಗೆ ಬಂದು, 'ಬೆಳಿಗ್ಗೆ ನನಗೆ ಮಿರ್ಚಿ ತಿನ್ನೋ ಆಸೆ ಆಗಿತ್ತು. ಸಂಜೆ ಅನ್ನೋವಷ್ಟರಲ್ಲಿ ಅದನ್ನ ಮಾಡಿದ್ದೀಯಲ್ಲ. ಇದು ವಿಚಿತ್ರ' ಅಂದ್ರು. ಅದಕ್ಕೆ ಹೇಳೋದು ಭಾವನೆಗಳನ್ನು ಹೇಳೋಕೆ ಪದಗಳು ಬೇಕಾಗಲ್ಲ. ನಾಲಿಗೆ ಮಾತನಾಡೋದನ್ನ ನಿಲ್ಲಿಸಬಹುದು ಆದ್ರೆ ಕರಳು?

           ಒಂದೇ ಒಂದು ದಿನ ನಿಮ್ಮ ತಂದೆ ತಾಯಿಗೆ ಅಡುಗೆ ಮಾಡಿ ತಿನ್ನಿಸಿ ನೋಡಿ. ನಾನು ಅನುಭವಿಸಿರೋ ಆ ಸ್ವರ್ಗ ಸುಖ ಏನು ಅನ್ನೋದು ನಿಮಗೆ ಅರಿವಾಗುತ್ತೆ.

ಸೂಚನೆ: ಚಿತ್ರದಲ್ಲಿರೋ ನಳಪಾಕ ನಾನು ಮಾಡಿದ್ದು. ಗೂಗಲ್ ನಿಂದ ಕದ್ದ ಚಿತ್ರಗಳಲ್ಲ ಇವು. :)

Monday, November 12, 2012

ನನ್ನ ದೇಶ ಹೀಗಿರಬೇಕಾ ?


 ಕೆಲವು ವರ್ಷಗಳ ಹಿಂದೆ ನಾನು ಅಮೇರಿಕಕ್ಕೆ ಹೋದಾಗ ವಿಮಾನದಲ್ಲಿ ನಡೆದ ಘಟನೆಯಿದು. ಲಂಡನ್ನಿಂದ ಚಿಕಾಗೋಗೆ ಹೋಗಬೇಕಿದ್ದ ವಿಮಾನ ಅದು. ಅದು ನನ್ನ ಮೊದಲ ಪ್ರವಾಸ ಆಗಿದ್ದರಿಂದ ನನಗೆ ಬಹಳಷ್ಟು ಕಾತುರತೆ ಜೊತೆಗೆ ಒಂದಿಷ್ಟು ಭಯ. ನಾನು ಕೂತಿದ್ದ ಆಸನದ ಪಕ್ಕದಲ್ಲಿ ಸುಮಾರು 70 ವರ್ಷದ ಸುಂದರ ಹೆಂಗಸು (ಮುದುಕಿ ಅಂದ್ರೆ ತಪ್ಪಾಗಬಹುದು) ಕುಳಿತಿದ್ದಳು. ನನಗೆ ಮಾತನಾಡೋದು ತುಂಬಾ ಇಷ್ಟ ಆದ್ರೆ ಜೊತೆಗೆ ಯಾರದ್ರೂ ಇರಬೇಕಲ್ಲ. ಅಲ್ಲಿ ಇದ್ದದ್ದೇ 2 ಕೆಂಚು ಕೂದಲಿನ ಯುವತಿಯರು. ಜೊತೆಗೆ ಈ 70 ವರ್ಷದ ಯುವತಿ. ಆ ಇಬ್ಬರು ಮಹಿಳಾಮನಿಗಳೋ ಕಿವಿಯಲ್ಲಿ ಐಪ್ಯಾಡ್  ಸಿಗಿಸಿಕೊಂಡು, ಪ್ಲೇನ್ ಬಿದ್ರು ಕಣ್ಣು ಬಿಡೋ ಮೂಡ್ನಲ್ಲಿ ಇರಲಿಲ್ಲ. ಈ ಬ್ರಿಟಿಶ್ ಏರ್ವೇಸ್ ದು ಇಂಡಿವಿಜುಯಲ್ ಸ್ಕ್ರೀನ್ ಇದ್ದದ್ದರಿಂದ ನಾನು ಬಚಾವಾದೆ. ನನ್ನ ಹಳ್ಳಿಯಿಂದ ತಾಲ್ಲೂಕಿಗೆ ಹೋಗೋವಾಗ ಬಳಸುತ್ತಿದ್ದ ಡಕೋಟಾ ಬಸ್ ಪ್ರಯಾಣ ಎಸ್ಟೋ ಸುಖವಾಗಿತ್ತು ಸಂಬಂಧ ಇರಲಿ ಇಲ್ಲದಿರಲಿ, ಒಬ್ಬರಿಲ್ಲ ಒಬ್ಬರು ಮಾತು ಪ್ರಾರಂಭಿಸ್ತಾರೆ. ಹೇಗೆ ಈ ಗಾಡಿಗಳು ಐಶರಾಮಿ ಆಗುತ್ತಾ ಹೋಗುತ್ತವೋ ಮನುಷ್ಯನ ನಡುವಿನ ಅಂತರ ಜಾಸ್ತಿ ಆಗುತ್ತದೆ ಅನ್ನೋದು ನನ್ನ ಭಾವನೆ. ಚಿಕ್ಕವನಿದ್ದಾಗ ಎಸ್ಟೋ ಸಲ ಬಸ್ ಗಳಲ್ಲಿ ನಮ್ಮ ತಂದೆ ತಾಯಿಗೆ ಸೀಟ್ ಸಿಗದೇ ಇದ್ದಾಗ ನಾನು ಬೇರೆಯವರ ತೊಡೆಯ ಮೇಲೆ ಕುಳಿತು  ಪ್ರಯಾನಿಸಿದ್ದುಂಟು. ಅದೆಲ್ಲ ಹಳೆ ಕಥೆ ಬಿಡಿ. ಈ ಪುಷ್ಪಕ್ ವಿಮಾನ ಕಥೆ ಥರ ನನ್ನ ಕಥೆ ಆಗಿತ್ತು. ನನ್ನ ಜೀವನದಲ್ಲೇ ನಾನು ವಹಿಸಿದ ದೀರ್ಘ ಮೌನ ಅಂದ್ರೆ ಅದೇ ಇರಬೇಕು.


ನನ್ನ ಸುಕರ್ಮವೋ ಏನೋ ಎಂಬಂತೆ ಆ 70 ರ ಹೆಂಗಸು, ಕಿವಿಯಿಂದ ಹೆಡ್'ಫೋನ್ ತೆಗೆದು ನನ್ನ ನೋಡಿದಳು. ಇನ್ನೇನು ಅವಳು ನನ್ನ ಜೊತೆ ಮಾತನಾಡ್ತಾಳೆ ಅನ್ನೋ ಚಿಕ್ಕ ಸುಳಿವು ನನಗೆ ಸಿಕ್ತು. ಪಕ್ಕನೆ ನನ್ನ ಹೆಡ್'ಫೋನ್ ತೆಗೆದು ರೆಡಿ ಆದೆ. 'ಆರ್ ಯು ಫ್ರಾಂ ಇಂಡಿಯಾ'. 'ಹೌದಮ್ಮ ಮಹಾತಾಯಿ(ಎಸ್)' ನೀನು ಮಾತಾಡ್ಲಿ ಅಂತಾನೆ ಬಕಪಕ್ಷಿ ತಾರಾ ಕಾಯ್ತಾ ಇದ್ದೆ. ಶಬರಿ ಗೆ ಆ ರಾಮನ ದರ್ಶನ ಆದಾಗ ಆದ ಆನಂದ ನನಗಾಗಿತ್ತು. 'ಫಸ್ಟ್ ಟೈಮ್ ಟ್ರಾವೆಲ್?'. 'ಭಾರಿ ಇದ್ದೀಯಲ್ಲ ಮುದುಕಿ, ನಾನು ಮೊದಲ್ನೇ ಸಲ ಬರ್ತಾ ಇರೋದು ಅದೆಷ್ಟು  ಬೇಗ  ಕಂಡುಹಿಡಿದೆ' ಮನಸ್ಸಲ್ಲೇ ಅಂದುಕೊಂಡೆ. ಇದಾದ ಮೇಲೆ ಶುರು  ಆಯಿತು ನೋಡಿ, ಎಲ್ಲಿತ್ತೋ ಎಲ್ಲಿಲ್ಲವೋ ಆ 'ಸ್ಲಂ ಡಾಗ್' ಸಿನಿಮ ಮಾತು. 'ನಿಮ್ಮ ದೇಶದ ವಾಸ್ತು ಶಿಲ್ಪಿ ತುಂಬಾ ಚೆನ್ನಾಗಿದೆ. ಆ ತಾಜ್ಮಹಲ್ ನೋಡೋಕೆ ನಾವು ಒಂದು ಸಲ ಬರಲೇ ಬೇಕು. ಆ ಚಹಾ ಮಾಡುವ ಹುಡುಗ ಕೋಟಿ ಗೆಲ್ಲೋದು ತುಂಬಾ ಅಭೂತಪೂರ್ವ ಸಂಗತಿ. ಜಾಣ್ಮೆ ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ ಅನ್ನೋದು ಚೆನ್ನಾಗಿ ಸೆರೆಹಿಡಿದಿದ್ದಾರೆ'. ಇದೆಲ್ಲ ಕೇಳಿದ ಮೇಲೆ ನಾನು ಸುಮ್ಮನಿರ್ತೀನೆ, ಅಯ್ಯೋ ನೀವು ನೋಡಿರೋದು ಬರೀ 1 ಪರ್ಸೆಂಟ್. ಭಾರತಕ್ಕೆ ಬಂದು ಬರೀ ಟೂರ್ ಮಾಡೋಕೆ ನಿಮಗೆ ವರ್ಷಗಳು ಬೇಕು. ಪ್ರಕೃತಿ ಸೌಂದರ್ಯ, ಶಿಲ್ಪಕಲೆ, ಕೋಟೆ ಕೊತ್ತಲಗಳು ಒಂದೇ ಎರಡೇ. ನೂರು ಕಣ್ಣು ಸಾಲಲ್ಲ, ನನ್ನ ಎದೆ ಗರ್ವದಿಂದ ಉಬ್ಬಿಹೋಯಿತು. ಇದಾದ ಮೇಲೆ ಬಂತು ನೋಡಿ ಸಂಕಟದ ಸಮಯ. ಅದು ನಮ್ಮ ದೇಶದ ಬಡತನ, ಅನಕ್ಷರತೆ, ಅನಾಗರೀಕತೆ ಹಾಗೂ ಮೋಸ. ಎಲ್ಲದರ ಮೇಲೂ ಒಂದೊಂದು ಪುಸ್ತಕ ಬರೆಯುವಷ್ಟು ಪ್ರಶ್ನೆಗಳು. ನಾನೇ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಯೋಚನೆ ಮಾಡದಿರುವಷ್ಟು ಯೋಚನೆಗಳು ಆ ಮುದುಕಿಯಲ್ಲಿ. ಕೇವಲ 3 ಗಂಟೆ ಸಿನಿಮಾ ನೋಡಿ ನಮ್ಮ ದೇಶವನ್ನ ಅಳೆದು ಬಿಟ್ಟಳಲ್ಲ. ಮನಸ್ಸಿಗೆ ತುಂಬಾ ಬೇಜಾರಾಯ್ತು. ನಮ್ಮ ಮನೆ ವಿಷಯ ಬೇರೆಯವರು ಹೀನಾಯವಾಗಿ ಮಾತಾಡಿದ್ರೆ ಮನಸ್ಸಿಗೆ ಸರಿ ಅನ್ನಿಸೋದಿಲ್ಲ. ಅದು ಸತ್ಯ ಆಗಿದ್ರು ಕೂಡ. ನಾನು ಹಾಗೋ ಹೀಗೋ ಅವಳಿಗೆ ತಿಳಿಹೇಳಿದೆ. ಎಲ್ಲೋ ಒಂದೆರಡು ಕಡೆ ಭಿಕ್ಷೆ ಬೇಡ್ತಾರೆ ಅಂತ ಭಾರತದ ತುಂಬಾ ಭಿಕ್ಶುಕರೆ ಇದ್ದಾರೆ ಅಂತಲ್ಲ. ನಿಧಾನಕ್ಕೆ  ಎಲ್ಲ ಸರಿ ಹೋಗುತ್ತೆ ಅನ್ನೋದು ನನ್ನ ಸ್ಪಷ್ಟನೆ ಆಗಿತ್ತು. ನನಗೋ ಬೇರೆ ವಿಷಯದ ಬಗ್ಗೆ ಮಾತಾಡೋಣ ಅನ್ನೋ ಬಯಕೆ ಆದ್ರೆ ಅ ಮುದುಕಿ ಮತ್ತೆ ಮಾತು ಬದಲಿಸಿ ಅದೇ ಜಾಗಕ್ಕೆ ಬರೋಳು. ಕೊನೆಗೆ ತಲೆ ಕೆಟ್ಟು ಅವಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋಣ ಅಂತ ಸಿದ್ದನಾದೆ ಅಷ್ಟರಲ್ಲಿ ಊಟಕ್ಕೆ ತಯಾರಿ ಮಾಡುತ್ತಿದ್ದ ಆ ಏರ್ ಹೋಸ್ಟೇಸ್ ಬಂದು ಆ ಮುದುಕಿಗೆ ತಟ್ಟೆ ಕೊಟ್ಟಳು. ನನ್ನ ತಲೆ ತಿಂದು ಹೊಟ್ಟೆ ತುಂಬಿರಬೇಕು ಅವಳಿಗೆ, ಆದರೂ ಆ ಊಟ ತೆಗೆದುಕೊಂಡಳು.
ನನ್ನ ಊಟ ಇನ್ನೂ ಬರಲಿಲ್ಲ. ಕೊನೆಗೆ ಕ್ರಿಸ್ಟಿನ್ ಅನ್ನೋ ಏರ್ ಹೋಸ್ಟೇಸ್ ಬಂದು ನನಗೂ ಊಟ ಕೊಟ್ಟಳು. ನೋಡಿದ್ರೆ ಅದು ಚಿಕನ್. 'ನಾನು ಹೇಳಿದ್ದು ವೆಜ್ ಊಟ ಕಣ್ರೀ' ಅಂದೇ. ಅದಕ್ಕವಳು, ಹೌದಾ ಅಂತ ಹುಬ್ಬೆರಿಸಿದ್ಲು ಆಗ್ಲೇ ಗೊತ್ತಾಗಿದ್ದು ವೆಜ್ ಊಟ ಖಾಲಿಯಾಗಿತ್ತು  ಅಂತ. ಊಟ ವಾಪಸ್ ಕೊಟ್ಟೆ. ಎಲರೂ ಬಕಾಸುರನ ಹಾಗೆ ತಿಂತಾ ಇದ್ರೆ ನಾನು ಮಾತ್ರ, ಜ್ಯೂಸ್ ಹೀರುತ್ತಾ ಕುಳಿತೆ. ಪಕ್ಕದಲ್ಲಿ ಕುಳಿತಿದ್ದ ಮುದುಕಿಗೆ ನನ್ನ ಪರಿಸ್ಥಿನಿ ನೋಡಿ ಮರುಕ ಹುಟ್ಟಿತು ಅನ್ನಿಸುತ್ತೆ. ತನಗೆ ಕೊಟ್ಟಿದ್ದ ಬ್ರೆಡ್ ನನಗೆ ಕೊಟ್ಟಳು, ಜೊತೆಗಿಷ್ಟು ಜಾಮ್.
ಊಟ ಆದಮೇಲೆ ಮತ್ತೆ ಸ್ಲಂ ಡಾಗ್  ಕಥೆ ಮುಂದುವರೀತು. ಅಲ್ಲಿವರೆಗೂ ಆ ಸಿನಿಮ ನಾನು ನೋಡಿರಲಿಲ್ಲ. ಅದು ಹೇಗೆ ಚಿತ್ರಿಸಿದ್ದರೋ ನೋಡೇ ಬಿಡೋಣ ಅನ್ಕೊಂಡೆ. ಆ ಮುದುಕಿ ಹೇಳಿದಳು, ನಾನು ಆ ಸಿನಿಮಾನ 5 ಸಲ ನೋಡಿದ್ದೀನಿ ಅಂದ್ಲು. ಸರಿ ನಾನು ನೋಡ್ಬೇಕು ಅಂದುಕೊಂಡಿದ್ದೆ, ಆದ್ರೆ ಆಗಿಲ್ಲ  ಅನ್ನೋ ನನ್ನ ಮಾತಿಗೆ ಅವಳು ಹೇಳಿದಳು. 'ಈ ಪ್ಲೇನ್ ನಲ್ಲಿರೋ ವೀಡಿಯೊ ಸಿಸ್ಟಮ್ ನಲ್ಲಿ ಅದು ಇದೆ. ರೀಜನಲ್ ಚಾನೆಲ್ ನೋಡಿ' ಅಂದ್ಲು. ಆಗಲೇ ಗೊತ್ತಾಗಿದ್ದು, ಈ ಘಾಟಿ ಮುದುಕಿ ಯಾಕೆ ನನ್ನ ಪ್ರಾಣ ಹಿಂಡಿದ್ದು ಅಂತ.

ಸಿನಿಮಾ ನೋಡಿದೆ. ಗೊತ್ತಿರೋ ಅನೇಕ ಕುಂದುಗಳಿಗೆ ನನ್ನ ಮನಸ್ಸಲ್ಲೇ ಅಷ್ಟು ಪ್ರಶ್ನೆಗಳು ಉದ್ಭವಿಸಬೇಕಾದ್ರೆ, ಭಾರತದ ಬಗ್ಗೆ ಏನೂ ಗೊತ್ತಿರದ ಆ ಮುದುಕಿಗೆ ಅಷ್ಟು ಪ್ರಶ್ನೆಗಳು ಗೋಚರಿಸಿದ್ದು ಆಶ್ಚರ್ಯವಲ್ಲ.

ಭಿಕ್ಷಾಟನೆ ಅನ್ನೋ ರೋಗಕ್ಕೆ ನನಗೊಂದು ಉಪಾಯ ಹೊಳೆಯಿತು. ಇಲ್ಲಿವರೆಗೂ ಭಿಕ್ಷೆ ಹಾಕೋರು ಇರ್ತಾರೋ, ಭಿಕ್ಷೆ ಬೇಡೋದು ನಿಲ್ಲೋಲ್ಲ. ನನ್ನ ಮಿತ್ರನೊಬ್ಬ ಮೊನ್ನೇ ಹೀಗೆ ಟೀ ಅಂಗಡಿ ಹತ್ರ ನಿಂತಿದ್ದಾಗ, ಒಬ್ಳು 50 ವರ್ಷದ ಹೆಂಗಸು ಬಂದು ಕೈಚಾಚಿದಳು. 'ಒಂದು ರೂಪಾಯಿ ಕೊಡಿ' ಅನ್ನೋದು ಅವಳ ಬೇಡಿಕೆ. ನನ್ನ ಮಿತ್ರ ಪಟ್ಟನೆ ಕಿಸೆಯಿಂದ 2 ರೂಪಾಯಿ  ತೆಗೆದು, ಆ ಟೀ ಅಂಗಡಿಯವನಿಗೆ ಕೊಟ್ಟು 'ಅವಳಿಗೆ ಒಂದು ಬನ್ ಕೊಡಿ' ಅಂದ. ಮಾನವೀಯತೆ ಅನ್ನೋದು ಇಷ್ಟರ ಮಟ್ಟಿಗೆ ಇದ್ರೆ ಸಾಕು.

ಭಿಕ್ಷೆ ಬೇಡಿಸೋಕೆ ಕೆಲವರನ್ನು ದಾಳವಾಗಿ ಇರಿಸಿಕೊಂಡಿರುವ ಅನಾಮಧೇಯ ಕೈಗಳಿಗೆ ದುಡ್ಡಿನ ಬದಲು ಬನ್ ಸಿಕ್ಕರೆ? ಆ ಕೆಲಸ ಮುಂದುವರೆಯಿಸ್ತಾರ? ಯೋಚನೆ ಮಾಡಿ.  


ನನ್ನ ದೇಶ ಹೇಗಿರಬೇಕು?


Sunday, November 4, 2012

ಶಪಥಗೈದ ಬಬ್ರುವಾಹನ

 ಮೊನ್ನೆ ನೆಂಟರೊಬ್ಬರ ಮನೆಗೆ ಹೋದಾಗ, 'ನೀನು ಸಣ್ಣ ಆಗಿದ್ದೀಯ ಕಣೋ' ಅಂದ್ರು. ಹೇ ಹಾಗೇನಿಲ್ಲ ಇರೋ ಹಾಗೆ ಇದ್ದೀನಿ ಅಂದೆ. ಆದರೂ ಸಣ್ಣ ಆಗಿರೋದು ಸ್ವಲ್ಪ ಮಟ್ಟಿಗೆ ನಿಜಾನೆ. ಮನೆಗೆ ಬಂದು, ಹಾಗೆ ನನ್ನ ಹಳೆಯ ಫೋಟೊಗಳನ್ನ ನೋಡ್ತಾ ಇದ್ದೆ.  ಈ 6 ವರ್ಷಗಳಲ್ಲಿ ಅದೆಂಥ ಬದಲಾವಣೆ ಅಂತೀರಿ, ಈಗಿರುವ ದೇಹಸ್ಥಿತಿಗೂ ಆಗಿನ  ಫೋಟೋಗೂ ಅಜಗಜಾಂತರ. ಕಾರಣ ಏನಿರಬಹುದು ಅನ್ನೋದು ಒಂದು ಸಲ ಯೋಚನೆ ಮಾಡಿದೆ. 1. ಯಾಂತ್ರಿಕ ಬದುಕು [ಯಾವುದೊ ಟೈಮ್ ನಲ್ಲಿ ತಿನ್ನೋದು, ಏನು ಸಿಗುತ್ತೋ ಅದನ್ನ್ನೆ ತಿನ್ನೋದು]. 2.  ಸೈಕ್ಲಿಂಗ್/ಜಾಗ್ಗಿಂಗ್ ಏನೇ ಇದ್ರೂ 15 ದಿನಕ್ಕಿಂತ ಜಾಸ್ತಿ ಮುಂದುವರಿಯೋದಿಲ್ಲ 3. ಫಾಸ್ಟ್ ಫುಡ್. ಕೆಲವೊಮ್ಮೆ ಮೇಲಿನ 1 ಮತ್ತು 2 ಕ್ಕೆ ಅನೇಕ ಬಾರಿ ಪ್ರಯತಿನಿಸಿ ಸುಸ್ತಾದೆ. ಆದ್ರೆ 3ನೇಯದರ ಬಗ್ಗೆ ಯಾವತ್ತೋ ಯೋಚನೆ ಮಾಡಲಿಲ್ಲ. ಈ ಗೋಬಿ ಮಂಚೂರಿ, ಬರ್ಗರ್, ಚಾಕಲೇಟ್, ಐಸ್ ಕ್ರೀಮ್ಸ್ ಒಂದೇ ಎರಡೇ. ಆರೋಗ್ಯ ಹಾಳಾಗುತ್ತೆ ಅಂತ ಗೊತ್ತಿದ್ದೂ ಬಾಯಿಚಪಲದ ಮುಂದೇ ದೇಹ ಗುಲಾಮನಾಗಲೇ ಬೇಕು 
ಇವತ್ತಿಂದ ಏನೇ ಆದರೂ ಈ ಫಾಸ್ಟ್ ಫುಡ್ ಬಿಟ್ಟು ಬಿಡೋಣ ಅಂತ ತೀರ್ಮಾನ ಮಾಡಿದೆ. ಮನೇಲಿ ಕರಿದ ತಿಂಡಿ ಮಾಡಿದ್ದರೂ , ಕಣ್ಣಿಗೆ ಬಟ್ಟೆ ಕಟ್ಟಿದವನ  ಹಾಗೆ ಅದು ಕಂಡರೂ ಕಾಣದ ಹಾಗೆ ಓಡಾಡಿದೆ. ಸಂಜೆ ವರೆಗೂ ಮೇಲೆ ಹೇಳಿದ ಯಾವುದೇ ಪದಾರ್ಥದ ಗಾಳಿ ಕೂಡ ಹತ್ತಿರ ಸುಳಿಯದ ಹಾಗೆ ನೋಡಿಕೊಂಡೆ. ಸಂಜೆ 7 ಆಯಿತು. ಕಾಲೇಜ್ನ ಹಳೇ  ಮಿತ್ರನೊಬ್ಬ ಸಿಕ್ಕ. 'ಲೇ  ಎಷ್ಟು ದಿನಾ ಆತಲೇ ಭೆಟ್ಟ್ಯಾಗಿ, ಬಾರೆಲೇ ಚಹಾ ಕುಡಿಯೋಣು'. ಒಂದು ವೇಳೆ ಅಮೃತ ಕೊಟ್ಟ್ರು ಬೇಡ ಅಂತ ಹೇಳ್ತೀನೇನೋ ಆದ್ರೆ ಚಹಾ ನೋ ಚಾನ್ಸ್. 'ಚಹದ ಜೊತೆ ಏನು ತಿಂತಿ?' ಅಂದ. 'ಏ ಏನು ಬ್ಯಾಡ' ಅಂದೆ. ಅಲ್ಲೇ ಪಕ್ಕದಲ್ಲಿ ಬಿಸಿ ಬಿಸಿ ಬಜ್ಜಿ ಕರೀತಾ ಇದ್ರೂ. 'ಮಿರ್ಚಿ ತಿಂತಿ?' ನನ್ನ ಮಿತ್ರ ಆಗಲೇ ನನ್ನ ನಾಲಿಗೆ ನೀರು ಬರುವಂತೆ ಮಿರ್ಚಿ ಬಜ್ಜಿ ಕೈಲಿ ಹಿಡಿದು ತೋರಿಸಿದ. ಮನಸ್ಸು ಹೇಳ್ತು 'ಆಗಿದ್ದಾಗ್ಲಿ ಅವನೌನ, ಹೇಳಲೇ ಒಂದು ಪ್ಲೇಟ್' ಅದೇ ನನ್ನ ಉತ್ತರವಾಗಿತ್ತು ಮಿತ್ರ ನಾನು ಬಜ್ಜಿ ಚಹಾ ಸವಿದೆವು ಆದ್ರೆ ನನ್ನ ಬಬ್ರುವಾಹನ ಪ್ರತಿಜ್ನ್ಯೆ ನಾಳೆಗೆ ಮುಂದುವರಿದಿತ್ತು   


Saturday, November 3, 2012

ಸಂಬಂಧ

 ಈ ಶನಿವಾರ, ಭಾನುವಾರ ಅನ್ನೋದು ಶುದ್ಧ ಮೋಸ ಕಣ್ರೀ 5 ದಿನ ಕಳೆಯೋಕೆ ಒಂದು ಯುಗ ತೊಗೊಂಡ್ರೆ, ಈ ವೀಕೆಂಡ್ ಮಾತ್ರ 1 ನಿಮಿಷದಲ್ಲಿ ಕರಗಿ ಹೋಗುತ್ತೆ ಇವತ್ತು ಅಂತಹದ್ದೇ ಒಂದು ಶನಿವಾರ ಬೆಳಿಗ್ಗೆ ಎದ್ದದ್ದು 5.30 ಗೆ. ಮೂರು ತಲೆಮಾರಿಗೆ ಆಗೋವಷ್ಟು ಕೆಲಸದಲ್ಲಿ ಆರಿಸಿ ತೂಗಿಸಿ ಆಯ್ಕೆ 3 ಮಾಡಿದ್ದು ಕೆಲಸಗಳು 1. ಸಾಹಿತಿ ವಿವೇಕ್ ಶಾನಭಾಗ ಅವರನ್ನ ಭೇಟಿ ಮಾಡೋದು 2.  modular ಕಿಚನ್ ಡಿಸೈನ್ ಸೆಲೆಕ್ಟ್ ಮಾಡೋದು 3. ಬಿಲ್ಡರ್ ಹತ್ರ ಹೋಗಿ ಮನೆ ಸ್ಟೇಟಸ್ ಬಗ್ಗೆ ಮಾತಾಡೋದು ಮೂರು ಕೆಲಸ ಮುಗಿಸೋವಷ್ಟರಲ್ಲಿ ಸಂಜೆ 7. ಶನಿವಾರ ಉಪವಾಸ ಮಾಡೋದು ರೂಢಿ ಇರೋದಕ್ಕೆ ಒಳ್ಳೆಯದಾಯ್ತು. ಇಲ್ಲದಿದ್ರೂ  ಉಪವಾಸ ಗ್ಯಾರಂಟೀ. 
ಇದೇನು ಮಾಡಿರೋ ನಾಲ್ಕಾಣಿ ಕೆಲಸಕ್ಕೆ ಇಷ್ಟೋಂದು ಬಿಲ್ದಪ್ ಅಂತೀರಾ? ಅಯ್ಯೋ ಹೇಳ್ತೀನಿ ತಾಳಿ. 

ಸಂಜೆ ಮನೆಗೆ ಬಂದಾಗ ಅಮ್ಮ ಹೇಳಿದ್ರು, ಪಕ್ಕದ ಮನೆ 'ಅಮೋಘ ಮತ್ತು ಅವನ ತಂದೆ ತಾಯಿ  ಬಂದಿದ್ರು'. 'ಒಹ್ ಏನ್ ವಿಷಯ?' ಅಂದೆ. ಅವನ ಹುಟ್ಟಿದಬ್ಬಕ್ಕೆ ಕರೆಯೋಕೆ ಬಂದಿದ್ದ ಅನ್ನೋದು ಗೊತ್ತಾಯ್ತು. ಈ ಆಮೋಘ ನಾನು ನನ್ನ ಈಗಿರುವ ಮನೆಗೆ ಬಂದಾಗ 5 ತಿಂಗಳಿನವನಿದ್ದ. ಇವತ್ತು ಅವನ 2ನೆ ವರ್ಷದ ಹುಟ್ಟುಹಬ್ಬ. ಕಾಲ ಅನ್ನೋದು ತುಂಬಾ ಫಾಸ್ಟ್. ಸರಿ ಬೆಳಿಗ್ಗೆಯಿಂದ ಅವನ ಮುಖ ನೋಡಿರಲಿಲ್ಲ. ಲೈಫಲ್ಲಿ ಏನೋ ಮಿಸ್ಸಿಂಗ್ ಇತ್ತು. ಸರಿ ನಾನವನನ್ನು ಭೇಟಿ ಮಾಡಿ ಬರ್ತೀನಿ ಅಂತ ಹೊರಟೆ. ಅಮ್ಮ ಕೂಗಿದ್ರು,ಅವನಿಗೆ ಜ್ವರ, ಮಲಗಿರಬಹುದು. ಮನಸ್ಸು ಆ ಸುದ್ದೀ ಕೇಳಿ ತಡೀಲಿಲ್ಲ. ಗೊತ್ತಿಲ್ಲದೇ ನನ್ನ ಕಾಲುಗಳು ಅವರ ಮನೆಗೆ ದೌಡಾಯಿಸಿದವು. ಬಾಗಿಲು ಬಡಿದೆ. ಅವರ ತಾಯಿ ಬಾಗಿಲು ತೆರೆದರು. 'ಎಲ್ಲಿ ಪಾರ್ಟಿ' ಅಂದೆ. 'ಇಲ್ಲೇ ಕೂತಿದಾನೆ ನೋಡಿ, ಕಂಪ್ಲೀಟ್ ಡಲ್' ಅಂದ್ರು. ಸೋಫಾದ ಎರಡು ಚೇರ್ ನ  ಮಧ್ಯ ಇರು ಹ್ಯಾಂಡಲ್ ಮೇಲೆ ಕೂತಿದ್ದ ನನ್ನ ಭೂಪ. 'ಹೇ ಸೋನ್ಯಾ' ಅಂದೆ. ಎಲ್ಲಿಲ್ಲದ ಮುಗುಳ್ನಗೆ ಬೀರಿದ. ನನ್ನ ಎರಡು ತೋಳುಗಳನ್ನು ಬಿಚ್ಚಿ, 'ಬಾರೋ' ಅಂದೆ. ಒಂದೇ ಕ್ಷಣದಲ್ಲಿ ಚೇರ್ ನಿಂದ ಇಳಿದು. ಓದಿ ಬಂದ. ಅವನ್ನ ಎತ್ತಿ ಒಂದಿಷ್ಟು ಮುದ್ದಾಡಿದೆ ಬೆಳಿಗ್ಗೆಯಿಂದ ಆಗಿದ್ದ ದಣಿವು ಒಂದೇ ನಿಮಿಷದಲ್ಲಿ ಮಾಯ!! ಅವನ ಮೈ ಸುಡುತ್ತಿತ್ತು ಥರ್ಮಾಮೀಟರ್ನಿಂದ ನೋಡಿದ್ರೆ ಬರೋಬರಿ 101 ಡಿಗ್ರಿ. ಇಂಥ ಜ್ವರದಲ್ಲೂ ನನ್ನ ಒಂದು ಕೂಗಿಗೆ ಅವನು ಪ್ರತಿಕ್ರಯಿಸಿದ ರೀತಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು. ರಕ್ತಕ್ಕೂ ಮೀರಿದ ಸಂಬಂಧ ಮನಸ್ಸಿನದು ಅನ್ನೋದಕ್ಕೆ ಸಾಕ್ಷಿ ಯಾಗಿತ್ತು ಈ ಸಂಜೆ. ನಿಷ್ಕಲ್ಮಷ ಪ್ರೀತಿ ಅಂದ್ರೆ ಇದೆ ಅನ್ಸುತ್ತೆ.

Sunday, September 2, 2012

ಕ್ಷಮಾಪತ್ರ

         ಕೊನೆಗೂ ಈ ಪತ್ರ ಬರೆಯುವ ಸಮಯ ಈಗ ಕೂಡಿ ಬಂತು. ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಅಸ್ತಿತ್ವ  ಕೆಲವರ ನೆನಪಾಗಿ ಉಳಿಯಲು ಹೊರಟಿದೆ. ನಾ ಕಂಡ ಅನೇಕ ಕನಸುಗಳ, ಆಸೆ ಆಕಾಂಕ್ಷೆಗಳ ಮಹಾಪೂರದಲ್ಲಿ ನನಸಾಗದೇ ಉಳಿದದ್ದು ನನ್ನ ಪ್ರೀತಿ (ನೀನು).
ಜೀವನದುದ್ದಕ್ಕೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುವುದನ್ನು ಸಾರಿ ಸಾರಿ ಹೇಳುವ ವ್ಯರ್ಥ ಪ್ರಯತ್ನ ಮಾಡಿದೆ. ಎದೆಯಾಳದ ಭಾವನೆಗಳನ್ನು, ಎದೆ ಹರಿದು ತೋರಿಸುವ ಶಕ್ತಿ ನನಗಿಲ್ಲದಿದ್ದರೂ, ನಿನ್ನ ಮೇಲಿನ ಪ್ರೀತಿಯನ್ನು ಒತ್ತಿ ಒತ್ತಿ ಹೇಳುವ ಪ್ರಯತ್ನ ಮಾಡಿದೆ.
ನೀನು ನನ್ನ ಪ್ರೀತಿಯನ್ನು ಯಾವ ಕಾರಣಕ್ಕೆ ತಿರಸ್ಕರಿಸಿದೆ ಎನ್ನುವುದು ಇನ್ನು ನನಗೆ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಾಯಶಹ ಪ್ರಶ್ನೆಯಾಗಿಯೇ ಉಳಿಯುತ್ತದೆ ಮೊನಚಾದ ನಿನ್ನ ತಿರಸ್ಕಾರದ ಮಾತುಗಳು, ಅತೀ ನೋವು ಕೊಟ್ಟ ನಿನ್ನ ನಡುವಳಿಕೆಗಳು ನನ್ನ ಮನಸ್ಸನ್ನು ನೋಯಿಸಿದ್ರು, ನೋಯಿಸಿದವಳು ನನ್ನವಳೇ ತಾನೇ ಎನ್ನುವ ತೃಪ್ತ ಭಾವದಲ್ಲಿ ಅದನ್ಯಾವುದನ್ನು ನಾನು ಎಣಿಸಿಲ್ಲ.

          ನೀನು ನನ್ನನ್ನು ದೂರ ಮಾಡಿದ ಕ್ಷಣ ಮನಸಿಗೆ ಸಂಕಟವಾಯಿತು, ಮನ ನೊಂದಿತು. ಮತ್ತೊಮ್ಮೆ ನಿನ್ನನ್ನು ಕಂಡು ನನ್ನ ಪ್ರೇಮದಾಳದ ಬಗ್ಗೆ ನಿನಗೆ ಅರಿವು ಮೂಡಿಸುವ ಆಸೆಯಾಯಿತು. ಆದರೆ ಕೊನೆಗೊಂದು ನಿಮಿಷ ನನಗನ್ನಿಸಿದ್ದು, ಪ್ರೀತಿಯನ್ನು ವಿವರಿಸುವ ಪ್ರಸಂಗ ಬಂದರೆ ಅದೇ ಪ್ರೀತಿಗೆ ಸಿಗುವ ಅಕಾಲಿಕ ಸಾವು. ಅಂತಹ ಸಾವನ್ನು ನನ್ನ ಪ್ರೀತಿಗೆ ಕೊಡಲು ನನ್ನ ಮನ ಒಪ್ಪಲಿಲ್ಲ. 

           ನನ್ನ ಪ್ರಾಣ ಹಾರಿಹೋಗುವ ಈ ಕೊನೆಕ್ಷಣದಲ್ಲಿ ನಿನ್ನಲ್ಲಿ ಕ್ಷಮಾಪಣೆ ಕೇಳಬೇಕೆನಿಸುತ್ತಿದೆ. ನಾನು ನಿನ್ನನ್ನು ಅತಿಯಾಗಿ ಪ್ರೀತಿಸಿದ ಸಂದರ್ಭದಲ್ಲಿ ನಿನಗಾದ ಮುಜುಗರ ಮತ್ತು ಕಿರಿಕಿರಿ ಹಾಗೂ ನಿನಗೆ ಹೇಳದೆ ನಾನು ನಮ್ಮ ನಡುವೆ ನಡೆದ ಅನೇಕ ಸಿಹಿ ಘಟನೆಗಳನ್ನು ಕದ್ದೊಯ್ಯುತ್ತಿದ್ದೇನೆ. ಮರೆಯಲಾಗದ ಆ ಸುಂದರ ನೆನಪುಗಳ ಬುತ್ತಿ ಕಟ್ಟಿಕೊಂಡು ನನ್ನ ಸಾವಿನ ದಾರಿಯನ್ನು ಎದುರು ನೋಡುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸಿದ್ದು ಬಾಲಿಶತನವೋ ಅಥವಾ ನೀನು ನನ್ನನ್ನು ತಿರಸ್ಕರಿಸಿದ್ದು ನನ್ನ ಹಣೆಬರಹವೋ? ಗೊತ್ತಿಲ್ಲ !!! 

ಅದೇನೇ ಇರಲಿ, ಕ್ಷಮಿಸು ನನ್ನನ್ನು. . . . . . 

                                                                                                                                         ಇಂತಿ ನಿನ್ನ 

Thursday, March 8, 2012

ಗೊಂದಲದ ಗಾಳಿಪಟ

 ಈ ಗಾಳಿಪಟ ಹಾರಿಸೋದು ನನ್ನ ಅತೀ ಹೆಚ್ಚಿನ ಹವ್ಯಾಸಗಳಲ್ಲೊಂದಾದ ಕಾಲವದು. ಈಗ ನಾನೇ ಗಾಳಿಪಟ ಆಗಿದ್ದೀನಿ. ಸೂತ್ರ, ದಾರ ಎರಡೂ ಬೇರೆಯವರ ಕೈಗೆ ಕೊಟ್ಟು, ಅದಿರಲಿ. ನಾವು ಇದ್ದ ಬಾಡಿಗೆ ಮನೆಯ ಮಾಳಿಗೆಗೆ ಯಾವುದೇ ತಡೆಗೋಡೆಗಲಿರಲಿಲ್ಲ. ನಾನು ಪಟ ಹಾರಿಸಲು ಮೇಲೆ ಹತ್ತಿದ ಮರುಕ್ಷಣ ನನ್ನ ನಾಮದ ಜಪ ಮಾಡುತ್ತಿದ್ದುದ್ದು ಅಮ್ಮ ಮತ್ತು ಆಕ್ಕ. "ಬಿದ್ದುಗಿದ್ದೀಯ.. ಕೆಳಗ ಬಾರೋ.." ಈ ಮಾತು ಕೇಳಿ ಕೇಳಿ ಕಿವಿಗೆ ಅಭ್ಯಾಸ ಆಗಿ ಹೋಗಿತ್ತು. ಅದೇ ಪಕ್ಕದ ಊರಲ್ಲಿದ್ದ ನಮ್ಮಜ್ಜಿ ಮನೆ ಮಾಳಿಗೆ RCC, ಮತ್ತು ನಾಲ್ಕೂ ಕಡೆ ಗೋಡೆ ಹಾಕಿದ್ದ ನಮ್ಮಜ್ಜ. ಅಲ್ಲಿಗೆ ಹೋಗೋದಂದ್ರೆ ನನಗೆ ಎಲ್ಲಿಲ್ಲದ ಖುಷಿ. ಕಾರಣಗಳು ತುಂಬಾ ಇದ್ದವು. ಒಂದು, ನನ್ನ ಡಾರ್ಲಿಂಗ್ (ಅಜ್ಜಿ) ಜೊತೆ ತುಂಟಾಟ ಆಡಬಹುದಿತ್ತು. ಎರಡು, ನನಗೆ ಯಾವುದೇ ನಿರ್ಬಂಧಗಳು ಇರ್ತಾ ಇರಲಿಲ್ಲ. ಮೂರು, ಅಜ್ಜಿ ಕೈಯಿಂದ ಅವಲಕ್ಕಿ ತಿನ್ನೋದು ಸ್ವರ್ಗಸುಖ. ಹೀಗೆ ಅನೇಕ ಅನುಕೂಲಕರ ಕಾರಣಗಳಿದ್ದವು ನನಗೆ. ಈ ಕಾರಹುಣ್ಣಿಮೆ ಬಂತೆಂದರೆ, ನನ್ನ ಗಾಳಿಪಟ ಮಾಡೋ ಫ್ಯಾಕ್ಟರಿ ತೆರೆದುಕೊಳ್ಳುತ್ತಿತ್ತು. ಒಂದಾದಮೇಲೊಂದು ಪಟ ಮಾಡುವುದು. ಕಲರ್ ಪೇಪರ್, ನ್ಯೂಸ್ ಪೇಪರ್, ಕೊನೆಗೆ ಪ್ಲಾಸ್ಟಿಕ್ ಕೂಡ ಉಪಯೋಗಿಸಿ ಪಟ ಮಾಡ್ತಾ ಇದ್ದೆ. ಬಗೆ ಬಗೆಯ ಪ್ರಕಾರಗಳು, ವಿನ್ಯಾಸಗಳು, ಆಕಾರಗಳು ನನ್ನ ಕಲ್ಪನೆಗೆ ಕೊನೆಯೇ ಇರಲಿಲ್ಲ. ಇದೆಲ್ಲದರ ಜೊತೆಗೆ ನನಗೊಂದು ಹುಚ್ಚು ಆಸೆ, ಏನು ಅಂದ್ರೆ, ನನ್ನ ಗಾಳಿಪಟ ಆಕಾಶದಲ್ಲಿ ಹಾರೋವಾಗ ಬೇರೆ ಯಾರ ಪಟವು ಅಲ್ಲಿ ಇರಬಾರದು. ಅದು ಹೇಗೆ ಸಾಧ್ಯ? ಸಾಧ್ಯ ಮಾಡಿಸೋಕೆ ನನ್ನ ಹತ್ರ ಉಪಾಯಗಳಿದ್ದವು. ನನ್ನ ಪಟದ ಬಾಲಂಗೋಚಿಗೆ ೧೦-೧೨ shaving blade 'ಗಳನ್ನೂ ಕಟ್ತಾ ಇದ್ದೆ. ಬೇರೆ ಯಾರ ಪಟ ನನ್ನ ಮುಂದೆ ಬಂದರೂ, ಅವರ ದಾರದ ಮೇಲೆ ನನ್ನ ಪಟದ ಬಾಲಂಗೋಚಿಯನ್ನು ಕೆಡಹಿ, ಎಳೆದರೆ ಸಾಕು ಅವರ ಗಾಳಿಪಟ ನೆಲ ಕಚ್ಚುತ್ತಿತ್ತು. 
ನನ್ನ ಈ ಉದ್ಧಟತನಕ್ಕೆ ಎಲ್ಲರು ನನ್ನನು ಬೈದುಕೊಳ್ಳುತ್ತಿದ್ದರು, ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದ ಸುಖೀಪುರುಶ. ಆವತ್ತೊಂದು ದಿನ ನನ್ನ ಈ ಗಾಳಿಪಟದ ಪರಾಕ್ರಮ ನಡೆಸೋಕೆ ಅಣಿಯಾಗುತ್ತಿದ್ದೆ. ನನ್ನ ಸೋದರ ಮಾವನ ಮಗನೂ ನನ್ನ ಜೊತೆಗೆ ಇದ್ದ. ಏಕಾಏಕಿ ಗಾಳಿ ಬಂದು ನಾನು ನೆಲದ ಮೇಲೆ ಇಟ್ಟಿದ್ದ ನನ್ನ ಗಾಳಿಪಟ ಹಾರಿ ಪಕ್ಕದಲ್ಲೇ ಇದ್ದ ಹೈ ಟೆನ್ಶನ್ ಎಲೆಕ್ಟ್ರಿಕ್ ವೈರ್ ಮೇಲೆ ಬಿದ್ದಿತು. ನನ್ನ ಪಟದ ಬಾಲಂಗೋಚಿ ಆ ವೈರ್ ಗೆ ಸುತ್ತು ಹಾಕಿಕೊಂಡಿತು. ನಿಧಾನವಾಗಿ ಎಳೆಯಲು ನೋಡಿದೆ, ಬರಲಿಲ್ಲ. ನನ್ನ ಮನೆದೇವರನ್ನು ನೆನೆದು ಜೋರಾಗಿ ಜಗ್ಗಿದೆ. ಬಾಲಂಗೋಚಿ ಬರಲಿಲ್ಲ, ಬದಲಾಗಿ ಸೊಂಯ್ ಅನ್ನೋ ಸದ್ದು ಕೇಳೋಕೆ ಶುರು ಆಯಿತು. ಕೆಲಕ್ಷಣ ಆದ ಮೇಲೆ ದೂರದಲ್ಲೆಲ್ಲೋ ಢಮಾರ್ ಅನ್ನೋ ಶಬ್ದ ಕೇಳಿ ಬಂತು. ಏನೋ ಅಗಬರದ್ದು ಆಯಿತು ಅನ್ನೋ ಭಯ ನನ್ನನ್ನು ಆವರಿಸಿತು. ಮುಖದಲ್ಲಿ ದುಗುಡ ಮನೆ ಮಾಡಿತ್ತು. ಪಟ ಅಲ್ಲೇ ಬಿಟ್ಟು, ಕೆಳಗಿಳಿದು ಬಂದು ನಮ್ಮ ಅಜ್ಜಿ ಪಕ್ಕ ಕುಳಿತುಕೊಂಡೆ. ೧೦ ನಿಮಿಷ ಆಗಿರಬೇಕು, ಇಡೀ ಊರಿಗೆ ಊರೇ ನಮ್ಮ ಮನೆ ಮುಂದೆ ಬಂದು ನಿಂತಿದೆ. ಕಾರಣ ಏನು ಅನ್ನೋದು ನನಗೆ ಮಾತ್ರ ಗೊತ್ತಿತ್ತು. ನಾನು ಮಾಡಿದ ಮಹಾನ್ ಕೆಲಸಕ್ಕೆ, ಊರಿನ transformer ಸುಟ್ಟು ಕರಕಲಾಗಿತ್ತು. ಆ ಊರಿಗೆ ಇದ್ದದ್ದೇ ಅದೊಂದು ಮೇನ್ transformer , ಮೇಲಾಗಿ ಆ ಊರಿನ ಮುಖ್ಯ ಉದ್ಯೋಗ powerloom . ಎಲ್ಲರ ಹೊಟ್ಟೆ ಮೇಲೂ ನಾನೇ ತಣ್ಣೀರು ಬಟ್ಟೆ ಹಾಕಿದ್ದೆ. ಆಕಡೆಯಿಂದ ವಿಷಯ ಕೇಳಿಬಂದ ನನ್ನ ಸೋದರಮಾವ ನನ್ನ ಹೊಡೆಯೋಕೆ ಮುಂದಾದ, ಅಜ್ಜಿ ಮಾವನನ್ನು ತಡೆದು ನಿಲ್ಲಿಸಿದಳು. ನನ್ನನ್ನು ದೇವರ ಮುಂದೆ ನಿಲ್ಲಿಸಿ ಇನ್ನೊಮ್ಮೆ ಇಂಥ ಕೆಲಸ ಮಾಡೋಲ್ಲ ಅಂತ ಪ್ರಮಾಣ ಮಾಡಿಸಿದರು. ಪ್ರಮಾಣ ಮಾಡಿದೆ. ಬೆಳಿಗ್ಗೆವರೆಗೂ ಎಲ್ಲ ತಿಳಿಯಾಯಿತು. ಆದರೂ ಮನಸ್ಸು ಇನ್ನೂ ಭಯದಲ್ಲೇ ಇತ್ತು, ಸಂಜೆವರೆಗೂ ಯಾರ ಹತ್ರ ಮಾತಾಡಲಿಲ್ಲ. ನನ್ನ ಜೀವನದಲ್ಲೇ ಅಷ್ಟು ಶಾಂತವಾಗಿ ಕೂತು ಕಳೆದ ದಿನಗಳು ತುಂಬಾ ಕಮ್ಮಿ. ಯಾವುದಾದರು ಒಂದು ಕಿತಾಪತಿ ಕೆಲಸ ಮಾಡದೇ ಹೋದರೆ ಮನಸ್ಸಿಗೆ ಸಮಾಧಾನ ಸಿಗ್ತಾ ಇರಲಿಲ್ಲ. ಆವತ್ತು ಸಂಜೆವರೆಗೂ ಮೌನ ತಳೆದಿದ್ದೆ. ಸಂಜೆ ೫ ಆಗುತ್ತಿದ್ದಂತೆ ಇನ್ನು ತಡೆಯೋಕೆ ಆಗೋಲ್ಲ ಅಂದು, ಇನ್ನೊಂದು ಪಟ ತೊಗೊಂಡು ಮಾಳಿಗೆ ಏರಿದೆ. 

ಮತ್ತೆ ಮಾತಾಡೋಣ....  

ಚಪ್ಪಲಿ ಮೋಹ

ನನಗಾಗ ೧೦ ವರ್ಷ ಇರಬೇಕು. ಅಮ್ಮ-ಅಪ್ಪ ಇಬ್ಬರೂ ಕಷ್ಟ ಪಟ್ಟು ನಮ್ಮ ಸಂಸಾರ ರಥ ಎಳೆಯುತ್ತಿದ್ದ ಕಾಲವದು. ಆಗಿನ ಕಾಲಕ್ಕೆ ನನ್ನ ಆಸೆಗಳು ಆಕಾಶದಷ್ಟು ಎತ್ತರಕ್ಕೆ ಇರುತ್ತಿದ್ದವು. ಈಗಲೂ ಇವೆ, ಆ ಮಾತು ಬೇರೆ. ನನ್ನ ಆಸೆಗಳ ತೀವ್ರತೆಯನ್ನು ನೋಡಿ ಅಮ್ಮ ಯಾವಾಗಲೂ ಹೇಳೋರು "ನೀನು ರಾಜಾನ ಮಗ ಆಗಿ ಹುಟ್ಟಬೇಕಿತ್ತು, ತಪ್ಪಿ ಬಡ ಮಾಸ್ತರ್ ಮಗ ಆಗಿ ಹುಟ್ಟೀ". ಅದಕ್ಕೆ ನಾನು ಕೊಡ್ತಾ ಇದ್ದ ಉತ್ತರ ಈಗಲೂ ನನಗೆ ನಗು ತರಿಸುತ್ತದೆ. "ಅಮ್ಮ ಈಗರ ಏನಾತು, ಅಪ್ಪಗ ರಾಜ ಆಗು ಅನ್ನು, ನಾನು ರಾಜಾನ ಮಗ ಆಗ್ತೀನಿ". ನನ್ನ ಉತ್ತರ ಅವರಿಗೆ ನಗು ತರುತ್ತಿತ್ತೋ, ನೋವು ತರುತ್ತಿತ್ತೋ ನನಗಂತೂ ಗೊತ್ತಿಲ್ಲ. ಅವರ ಕೈಲಾದ ಕೆಲವೊಮ್ಮೆ ಕೈಲಾಗದ ಆಸೆಗಳನ್ನು ಕೂಡ ನೆರೆವೇರಿಸುತ್ತಿದ್ದರು. ನನಗೆ ಅದರ ಅರಿವು ಅಷ್ಟರಮಟ್ಟಿಗೆ ಆಗ ಇರಲಿಕ್ಕಿಲ್ಲ. ಅಂತಹದ್ದೇ ಒಂದು ಆಸೆ ಈಡೇರಿ, ಒಡೆದು ಹೋದ ಒಂದು ಘಟನೆ ಈ ಬರಹಕ್ಕೆ ನಾಂದಿ. 
ನನಗೆ ಮೊದಲಿನಿಂದಲೂ ಚಪ್ಪಲಿ, ಬೂಟು, ಬಟ್ಟೆ ಮತ್ತು ಆಟಿಕೆ (electronic) ಇವೆಲ್ಲದರ ಮೇಲೆ ಎಲ್ಲಿಲ್ಲದ ಮೋಹ. ನನ್ನ ಸ್ನೇಹಿತರು ತೂತು ಬಿದ್ದ ಚಡ್ಡಿ ಹಾಕ್ಕೊಂಡು ಶಾಲೆಗೆ ಬಂದ್ರೆ, ನಾನು ಮಾತ್ರ ಫುಲ್ ಪ್ಯಾಂಟ್ ಧರಿಸ್ತ ಇದ್ದೆ. ಇನ್ನೂ ಹೇಳಬೇಕು ಅಂದ್ರೆ, ಮನೆದೇವ್ರು (ರವಿಚಂದ್ರನ್ ಸಿನಿಮ) ನೋಡಿ ಅದರಲ್ಲಿ ಅಪ್ಪ-ಮಗ ಒಂದೇ ತರಹ ಬಟ್ಟೆ ಹಾಕಿದ್ರು ಅನ್ನೋ ಕಾರಣಕ್ಕೆ ನಮ್ಮಪ್ಪನಿಗೂ ಅದೇ ತರಹದ ಬಟ್ಟೆ ಡಿಸೈನ್ ಮಾಡಿಸಿದ ಭೂಪ ನಾನು. ಅವರಿಗೋ ಆ ಪ್ಯಾಂಟ್ ಹೊಲಿಸಿಕೊಲ್ಲೋಕೆ ಎಲ್ಲಿಲ್ಲದ ಮುಜುಗರ. ನನಗೋ ಎಲ್ಲಿಲ್ಲದ ಆಸೆ. ಕೊನೆಗೂ ನನ್ನ ಆಸೆ ಗೆದ್ದಿತ್ತು. ಪ್ಯಾಂಟ್ ಆದಮೇಲೆ ಅದು ಅಲ್ಲಿಗೆ ನಿಲ್ಲಲಿಲ್ಲ, ಚಪ್ಪಲಿ ಕೂಡ ಬೇಕು ಅಂದೇ. ಸರಿ, ನಮ್ಮ ಊರಿನಲ್ಲಿ ಇರುವ ಎಲ್ಲ ಚಪ್ಪಲಿ ಅಂಗಡಿಗಳಿಗೆ ಅಲೆದಾಡಿ ಇದ್ದ ಚಪ್ಪಲಿ ಸವೆಸಿದೆ. ಕೊನೆಗೆ ರವಿಚಂದ್ರನ್ ಹಾಕಿದಂತ ಚಪ್ಪಲಿಗಳು ಸಿಕ್ಕವು. ಬೆಲೆ ರೂ. ೨೫. ಸಾಮಾನ್ಯವಾಗಿ ನನ್ನ ಚಪ್ಪಲಿ ಬರ್ತಾ ಇದ್ದುದು ೫ ರೂಪಾಯಿಗೆ. ೫ ಪಟ್ಟು ದುಬಾರಿ ಇರೋ ಚಪ್ಪಲಿಗಳನ್ನ ನಮ್ಮಪ್ಪ ಕೊಡಿಸಿದರು. ನಾನು ಸ್ನಾನ ಮಾಡ್ತಾ ಇದ್ದುದು ಗಡಿಬಿಡಿಯಿಂದಾದ್ರು, ಆ ಚಪ್ಪಲಿಗಳಿಗೆ ಮಾತ್ರ ಸಮಯ ತೆಗೆದುಕೊಂಡು ಸ್ವಚ್ಚಗೊಳಿಸ್ತ ಇದ್ದೆ. ಅದೇಕೋ ಆ ಚಪ್ಪಲಿಗಳ ಮೇಲೆ ಅತಿಯಾದ ಪ್ರೀತಿ.
ಒಂದು ದಿನ ಪಕ್ಕದೂರಿಗೆ ಮದುವೆಗೆ ಹೋಗುವ ಸಂದರ್ಭ ಬಂತು. ನಾನು ಮನೆದೇವ್ರು ಗೆಟಪ್ಪಿನಲ್ಲಿದ್ದೆ. ಅಪ್ಪ, ಅಮ್ಮ, ಅಕ್ಕ ಮತ್ತು ನಾನು ಬಸ್ ಹತ್ತಿ ಮದುವೆ ಮನೆಗೆ ಹೋದ್ವಿ. ನನಗೋ ನನ್ನದೇ ಚಿಂತೆ. ಏನಂತೀರಾ? ಮದುವೆ ಮನೆಯಲ್ಲಿ ನನ್ನ ಚಪ್ಪಲಿಗಳನ್ನು ಯಾರಾದ್ರೂ ಕದ್ದುಬಿಟ್ಟರೆ? ಮೊದಲೇ ನನ್ನ ತಲೆ 300kms ಸ್ಪೀಡಲ್ಲಿ ಓಡತ ಇತ್ತು. ಆ ಸಮಸ್ಯೆಗೆ ಪರಿಹಾರ ಹುಡುಕೋದು ಕಷ್ಟ ಆಗಲಿಲ್ಲ. ಅಲ್ಲೇ ಇದ್ದ ಒಂದು ಚೀಲವನ್ನು ತೆಗೆದುಕೊಂಡು ಅದರಲ್ಲಿ ಚಪ್ಪಲಿ ಇಟ್ಟು, ಯಾರಿಗೂ ಕಾಣದ ಹಾಗೆ ಮೂಲೆಯಲ್ಲಿ ಅಡಗಿಸಿಟ್ಟೆ. ಮದುವೆ ಆಯಿತು, ಎಲ್ಲರು ತಮ್ಮ ತಮ್ಮ ಮನೆಗೆ ಹೋದರು. ನಾವೂ ಮರಳಬೇಕಾದ ಸಮಯ ಬಂತು. ಅಪ್ಪ, ಅಮ್ಮ, ಅಕ್ಕ ಎಲ್ಲರು ರೆಡಿಯಾಗಿದ್ದರು. ನಾನು ಮಾತ್ರ ನನ್ನ ಆಟದಲ್ಲಿ ಮಗ್ನನಾಗಿದ್ದೆ. ಕೂಗಿ ಕರೆದರು "ಲೇಟಾಗತದ ಬಾರೋ. ಬಸ್ ಹೋದ್ರ ಮತ್ತ ಸಿಗುದಿಲ್ಲ". ಒಲ್ಲದ ಮನಸ್ಸಿನಿಂದ ಆಟ ಬಿಟ್ಟು ಬಂದು, ಇರೋ ಬಾರೋ ದೊಡ್ದೊರಿಗೆಲ್ಲ ಕಾಲು ಮುಗಿದು, ಚಪ್ಪಲಿ ಹಾಕ್ಕೊಂಡು ಬರ್ತೀನಿ ಅಂತ ಚಪ್ಪಲಿ ಅಡಗಿಸಿಟ್ಟಿದ್ದ ಜಾಗೆಕ್ಕೆ ಹೋದೆ. ನೀವು ಅನ್ಕೊಂಡ ಹಾಗೆನೆ ಆಗಿತ್ತು. ನನ್ನ ಚಪ್ಪಲಿಗಳು ಚೀಲದ ಸಮೇತ ಮಾಯವಾಗಿದ್ದವು. ಶರಪಂಜರ ಕಲ್ಪನಾ ಥರ "ಇಲ್ಲೇ ಕಳಕೊಂಡೆ..."  ಅನ್ನೋವಷ್ಟು ಬೇಜಾರಾಯ್ತು. ಗೊತ್ತಿಲ್ಲದೇ, ಕಣ್ಣಲ್ಲಿ ಕಣ್ಣೀರು ಉಕ್ಕಿ ಬಂತು. ಅದೇನು ಚಪ್ಪಲಿ ಕಳೆದುಕೊಂಡ ದು:ಖವೋ ಅಥವಾ ಅಷ್ಟು ದುಬಾರಿ ಚಪ್ಪಲಿ ಕಳೆದುಕೊಂಡ ನನಗೆ ಮತ್ತೆ ಅಂತ ಚಪ್ಪಲಿ ಕೊಡಿಸದೇ ಇರಬಹುದು ಅನ್ನೋ ಕಾರಣಕ್ಕೋ ಗೊತ್ತಿಲ್ಲ. ಆದ್ರೆ ನೋವಾಗಿದ್ದಂತು ನಿಜ. ಬರೆಗಾಲಿನಿಂದ ರವಿಚಂದ್ರನ್ ನಡೆದರೆ ಹೇಗಿರುತ್ತೋ ಹಾಗಿತೂ ನನ್ನ ಪರಿಸ್ಥಿತಿ. 

ಮತ್ತೆ ಸಿಗ್ತೀನಿ...    

ನನ್ನ ಸಂಗಾತಿ

ನನಗಿ ಅವಳಿಗೂ ೪-೫ ವರ್ಷದ ಪರಿಚಯ ಇರಬೇಕು. ನಾನು ಮೊದಲ ಸಲ ಯು.ಎಸ್.ಎ ಗೆ ಹೋದಾಗ ಅವಳ ಪರಿಚಯ ಆಗಿತ್ತು. ಅದಾದ ಮೇಲೆ ಪ್ರತಿನಿತ್ಯ ಅವಳೊಂದಿಗೆ ಒಂದು ತರಹದ ನಂಟು ಬೆಳೆದುಕೊಂಡಿತು. ಅವಳನ್ನು ಮನೆಗೆ ಕರೆದುಕೊಂಡು ಹೋದಾಗ ಅಮ್ಮ ಕೂಡ ಅವಳನ್ನು ಸಂತೋಷದಿಂದ ಸ್ವಾಗತಿಸಿದರು. ಈಗಂತೂ ಅವಳು ನನ್ನ ಬಾಳಿನ ಒಂದು ಭಾಗವಾಗಿಬಿಟ್ಟಿದ್ದಾಳೆ. ಅವಳಲ್ಲಿ ಇಷ್ಟವಾಗುವ ಅನೇಕ ಗುಣಗಳಿವೆ. ಒಂದನ್ನು ಹೇಳಲೇ ಬೇಕು ಅಂದ್ರೆ ಅವಳ ಶಿಸ್ತು, ನಾನು ಯಾವ ವಸ್ತುವನ್ನು ಎಲ್ಲಿ ಇಡಬೇಕು ಅನ್ನೋದನ್ನ ಅವಳು ಬಲ್ಲಳು. ನಾನು ಆಫೀಸ್ ಗೆ ಹೊರಟ ತಕ್ಷಣ ಬೆನ್ನ ಹಿಂದೆ ಬಂದು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ. ಅವಳು ಹಾಗೆ ಮಾಡಿದಾಗಲೆಲ್ಲ ಮನಸ್ಸಿಗೆ ಏನೋ ಒಂಥರಾ ಹೇಳಲಾಗದ ಸಂತೋಷ. ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಬೀಳಬಾರದು ಅನ್ನೋದು ಅವಳ ಅಂತರಾಳದ ಮಿಡಿತ. ಅವಳು ಕೊಟ್ಟ ಭಾಷೆಯಂತೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಒತ್ತಡಗಳಿಗೆ, ನೋವುಗಳಿಗೆ ಅವಳು ನನ್ನನ್ನು ನೂಕಿಲ್ಲ. ಅವಳನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವ ಹಾಡು "ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ... ನಾ ಕಾಣೆ..". ನನ್ನ ಜೊತೆ ಇಷ್ಟು ಅನ್ನೋನ್ಯತೆಯಿಂದ ಇರುವ ಅವಳಿಗೆ ಧನ್ಯವಾದಗಳು. ಅವಳ ಜಾಗವನ್ನು ಬಹುತೇಕ ಯಾರೂ ತೆಗೆದುಕೊಳ್ಳಲಾರರು ಅನ್ಸುತ್ತೆ. ಅದರೂ ಸಂಸೋನೈಟ್ ಕಂಪನಿ ಅವರು ಹೊಸ ಲ್ಯಾಪ್ಟಾಪ್ ಬ್ಯಾಗ್ ಹೊರತಂದರೆ ಬಹುತೇಕ ನಾನು ಇವಳಿಗೆ ವಿದಾಯ ಹೇಳಬಹುದು.

ಮತ್ತೆ ಸಿಗ್ತೀನಿ... 

Tuesday, March 6, 2012

ಉತ್ತರ ನನಗೂ ಗೊತ್ತಿಲ್ಲ

ಇವತ್ತು ಮಧ್ಯಾನ್ನ ನನ್ನ ಕಂಪನಿಯ ದೂರವಾಣಿ ಬಳಕೆ ಮಾಡಿದ ಪಟ್ಟಿ ಬಂತು. ಇದು ಪ್ರತಿ ತಿಂಗಳು ನಾವು ಉಪಯೋಗಿಸುವ ದೂರವಾಣಿ ಕರೆಗಳ ವಿವರಣೆ ಹೊಂದಿರುತ್ತೆ. ಇದರಲ್ಲಿ ನಾವು ಯಾರ ಜೊತೆ, ಎಸ್ಟೊತ್ತಿಗೆ, ಎಷ್ಟು ನಿಮಿಷ ಮಾತಾಡಿದ್ದೀವಿ ಅನ್ನೋ ಎಲ್ಲ ಮಾಹಿತಿ ಅದರಲ್ಲಿ ಇರುತ್ತೆ. ಈ ಒಂದು ವಾರದ ಹಿಂದ ನನ್ನ ವೈಯಕ್ತಿಕ ದೂರವಾಣಿಯ ಕರೆಗಳ ವಿವರ ಕೂಡ ಬಂತು. ಎರಡನ್ನೂ ಒಂದು ದಿನ ಒಟ್ಟಿಗೆ ನೋಡಿದಾಗ ಒಂದು ಆಶ್ಚರ್ಯಕರ ಸಂಗತಿ ಗೋಚರಿಸಿತು. ನಾನು ವೈಯಕ್ತಿಕ ದೂರವಾಣಿಯಲ್ಲಿ ಒಂದು ತಿಂಗಳಲ್ಲಿ ಮಾತನಾಡಿದ್ದು ಕೇವಲ ೩ ಗಂಟೆ. ಅದೇ ಕಚೇರಿಯ ದೂರವಾಣಿಯಲ್ಲಿ ಮಾತನಾಡಿದ್ದು ೧೬ ಗಂಟೆ. ಅಂದ್ರೆ ೫ ಪಟ್ಟು. ಎಷ್ಟೋ ಜನ ಮಿತ್ರರಿಗೆ ನನ್ನ ಧ್ವನಿ ಮರೆತು ಹೋಗಿರಬಹುದೇನೋ? ಅಥವಾ ಅವ್ರು ಫೋನ್ ಮಾಡಿದರೆ ಅವರ ಧ್ವನಿ ನಾನು ಗುರುತಿಸಬಹುದ? ಗೊತ್ತಿಲ್ಲ. ಈ ಕೆಲವು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ಹಂಚಿಕೊಂಡು ಮಿತ್ರರು ಎಲ್ಲಿದ್ದರೋ ಏನಾಗಿದ್ದರೋ ಒಂದು ಗೊತ್ತಿಲ್ಲ. ಈ ಯಾಂತ್ರಿಕ ಬದುಕು ಮುಗಿಸಿ ನಿವೃತ್ತನಾಗಿ ಮನೆಗೆ ಹೋದಾಗ ಯಾರಾದ್ರೂ ಜೊತೆ ಮಾತಾಡಬೇಕು ಅಂದ್ರೆ ಅದಕ್ಕೆ ದಾರಿ ಇದೆಯಾ? ಗೊತ್ತಿಲ್ಲ. ಈ ಕಸ್ಟಮರ್ ಕಾಲ್ ಅನ್ನೋದು ನಿವೃತ್ತಿ ಹೊಂದಿದ ಮೇಲೆ ನಿಂತು ಹೋಗುತ್ತೆ. ಮುಂದೆ? ಗೊತ್ತಿಲ್ಲ. ನಮ್ಮ ತಾತ ಮುತ್ತತರು, ಊರ ಮೇಲಿನ ಕಟ್ಟೆ, ಕೆರೆ ತೋಟ ಅಂತ ಏನೇನೋ ಸ್ಥಳಗಳನ್ನು ಮಾಡಿಕೊಂಡಿದ್ರು. ಆದ್ರೆ ನಾವು ಮಾಡಿಕೊಂಡಿರೋದು ಕೆಲಸಕ್ಕೆ ಬರದೆ ಇರೋ facebook orkut ಗಳು. ಇವೆಲ್ಲ ಇರದೇ ಇದ್ದ ಪಕ್ಷ ಜೀವನ ಹೇಗೆ ಅಂತ ಈವತ್ತಿನ ಯುವಕರನ್ನು ಕೇಳಿದ್ರೆ, ಮತ್ತೆ ಉತ್ತರ ಗೊತ್ತಿಲ್ಲ. 

ಈ ಅನೇಕ ಗೊತ್ತಿಲ್ಲಗಳಿಗೆ ಉತ್ತರ ಸಿಗಬೇಕಾದರೆ ಇನ್ನು ೩೦ ವರ್ಷ ಕಾಯಬೇಕು ನಾನು. ಉತ್ತರ ಗೊತ್ತಾದ ಮೇಲೆ ಅದರ ಬಗ್ಗೆ ಮತ್ತೆ ಬರೀತೀನಿ.   

ನಾನು ಮಾಡಿದ ಒಳ್ಳೆ ಕೆಲಸ

ನನ್ನದು ೧ನೇ ತರಗತಿಯಿಂದ ಕನ್ನಡ ಮಾಧ್ಯಮ. 
ಓದಿದ್ದು ಕನ್ನಡ ಗಂಡು ಮಕ್ಕಳ ಶಾಲೆ ನಂ ೧. ನಮ್ಮ ಶಾಲೆಯಲ್ಲಿ ಒಂದು ಕಟ್ಟುನಿಟ್ಟಾದ ನಿಯಮ ಇತ್ತು. ಎಲ್ಲರೂ "ಒಳ್ಳೆ ಕೆಲಸ" ಪುಸ್ತಕ ಬರೀಲೇಬೇಕು. ಏನಿದು ಒಳ್ಳೆ ಕೆಲಸದ ಪುಸ್ತಕ ಅಂತೀರಾ, ಹೇಳ್ತೀನಿ. ಪ್ರತಿನಿತ್ಯ ಪ್ರತಿಯೊಬ್ರು ಕನಿಷ್ಠ ಪಕ್ಷ ಒಂದಾದ್ರೂ ಒಳ್ಳೆ ಕೆಲಸ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಎಲ್ಲರೂ  ಕಾಡ್ದಾಯವಾಗಿ ಬರೀಲೆಬೇಕಿತ್ತು. ನಾವು ಚಿಕ್ಕವರು, ಒಳ್ಳೆ ಕೆಲಸ ಹುಡುಕಿಕೊಂಡು ಮಾಡಬೇಕು. ಇಂಥದ್ದರಲ್ಲಿ ದಿನ ದಿನ ಒಂದು ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಭಾರ ತಲೆ ಮೇಲೆ ಇದ್ರೆ ಹೇಗೆ. ಅದರಲ್ಲೂ ಶಾಲೆ ತೆರೆದಿರೋ ೨೧೨ ದಿನಗಳಿಗೂ ಒಂದೊಂದು ಒಳ್ಳೆ ಕೆಲಸ ಬರೀಯೋದು ಯಾವ ಕರ್ಮ ಅನ್ನೊಂದು ನನ್ನ ಭಾವನೆ ಆಗಿನಕಾಲಕ್ಕೆ. ಆಗ ನಾನು ಬರೀತಾ ಇದ್ದ ಕೆಲವು ಒಳ್ಳೆ ಕೆಲಸದ ಪರಿ ಹೀಗಿರುತ್ತಿತ್ತು. "ನಾನು ಭಿಕ್ಷುಕನಿಗೆ ೧೦ ಪೈಸೆ ಕೊಟ್ಟೆನು". "ನಾನು ಒಬ್ಬ ಕುರುಡನಿಗೆ ರಸ್ತೆ ದಾಟಿಸಿದೆನು", "ರಸ್ತೆಯಲ್ಲಿ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕೆ ಇತ್ತೇನು", "ನಾನು ನಾಯಿಗೆ ಬ್ರೆಡ್ಡು ತಿನ್ನಿಸಿದೆನು" ಇನ್ನೂ ಹಲವು ಹುಚ್ಚು ವಾಕ್ಯಗಳು ಇರುತ್ತಿದ್ದವು. ಒಂದೇ ವಾರದಲ್ಲಿ ಎರಡು ಸಲ ರಸ್ತೆಯಲ್ಲಿ ಬಿದ್ದ ಕಲ್ಲನ್ನು ಪಕ್ಕಕ್ಕೆ ಇಟ್ಟೆನು ಅಂತ ಬರೆದಾಗ ನಮ್ಮ ಮೇಷ್ಟ್ರು ಕೇಳೋರು "ಏನೋ ಇದು ಬರಿದದ್ದನ್ನೇ ಬರಿದಿದ್ದೀಯ?" ಆಗ ನನ್ನ ವಿನಮ್ರ ಉತ್ತರ "ಇದು ಮನೆ ಹತ್ರ ಇದ್ದ ಕಲ್ಲು ಸರ್ ಮೊನ್ನೆ ಬರೆದದ್ದು ಶಾಲೆ ಹತ್ರ ಇದ್ದ ಕಲ್ಲು". ಮೇಷ್ಟರಿಗೂ ಗೊತ್ತಿತ್ತು, ಈ ನನ್ಮಗ ರಸ್ತೆಯಲ್ಲಿ ಕಲ್ಲು ಇಲ್ಲದೆ ಇದ್ರೂ, ಎಲ್ಲಿನದೋ ಒಂದು ತಂದು ಹಾಕಿ ಪಕ್ಕಕ್ಕೆ ಇಡ್ತಾನೆ ಅಂತ.  
ಈಗ ಆ ದಿನಗಳನ್ನ ನೆನೆಸಿಕೊಂಡರೆ ನಗು ಬರುತ್ತೆ, ಜೊತೆಗೆ ಒಂದು ವಿಚಾರ ಕೂಡ ಹೊಳಿಯುತ್ತೆ. ಅಂತಹದ್ದೇ ಡೈರಿ ಈಗ ಬರೆಯೋ ಹಾಗೆ ಆದ್ರೆ? ವಾರಕ್ಕೆ ಒಂದು ವಾಕ್ಯ ಬರೆಯೋದು ಕಷ್ಟ ಅನ್ಸುತ್ತೆ. ಇವತ್ತಿನ ಪೈಪೋಟಿ ಜೀವನ ಶೈಲಿಯಲ್ಲಿ, ನಮ್ಮ ಕೆಲಸ ನಾವು ಮಾಡ್ಕೊಂಡು, ಸಂಜೆ ಮನೆಗೆ ಬಂದು ಹೆಣದ ಥರ ಬಿದ್ದುಕೊಳ್ಲೋ ನಮಗೆ ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಅನಿವಾರ್ಯತೆ ಎಲ್ಲಿದೆ. ಆದ್ರೆ ಒಳ್ಳೆ ಕೆಲಸ ಅನ್ನೋದು ಅನಿವಾರ್ಯತೆ ಅಲ್ಲದೇ ಇದ್ದರು ಅದು ಮಾನವ ಧರ್ಮ. ನಾವು ಮಾಡೋ ಒಂದು ಸಣ್ಣ ಪ್ರಯತ್ನ ಯಾರದ್ದೋ ಜೀವನದಲ್ಲಿ ಯಶಸ್ಸು ತಂದು ಕೊಡುತ್ತೆ ಅನ್ನೋದಾದ್ರೆ ಯಾಕೆ ಮಾಡಬಾರದು? ಮೊನ್ನೆ ನನಗೊಂದು resume ಬಂತು, ನಾನು ಮಾಡಿದ್ದಿಷ್ಟೇ, ನನಗೆ ಗೊತ್ತಿರೋರಿಗೆಲ್ಲ ಆ ಹುಡುಗನಿಗೆ ಕೆಲಸ ಹುಡುಕೋಕೆ ನೆರವಾಗಿ ಅಂತ ಕೇಳಿಕೊಂಡೆ. ಕಳಿಸಿದ್ದು ೪೦-೫೦ ಜನಕ್ಕೆ. ಆದ್ರೆ ಎಷ್ಟು ಜನ ಆ ನೆರವಿನ ಕೋರಿಕೆಗೆ ಸ್ಪಂದಿಸಿದ್ರೋ ಗೊತ್ತಿಲ್ಲ. ಆದರೆ ಮಾರನೆ ದಿನ ಬಂದ ಒಂದು ಮಿಂಚಂಚೆ ನನಗೆ ಖುಷಿ ತಂದಿತ್ತು. ನನ್ನ ಮಿತ್ರರಲ್ಲೊಬ್ಬ, ಅವನ ಮಿತ್ರನಿಗೆ ಆ ಮಿಂಚಂಚೆ ರವಾನೆ ಮಾಡಿದ್ದ. ಆ ಮಿತ್ರನ ಸಹಾಯದಿಂದ, ಹುಡುಗನಿಗೆ ಸಂದರ್ಶನ ಏರ್ಪಾಡು ಮಾಡಲಾಗಿತ್ತು. ತಕ್ಷಣವೇ ನನ್ನ ಮಿತ್ರನಿಗೆ ಮೆಸೇಜ್ ಮಾಡಿದೆ "Thanks for your efforts kano" ಅಂತ. ಅವನು ಹೇಳಿದ ಉತ್ತರ ನನ್ನನು ಮೂಕನನ್ನಾಗಿಸಿತ್ತು. "ಅಣ್ಣ, ನೀನೇ ಹೇಳಿದ್ದೆ ಒಂದು ದಿನ, ಯಾರಿಗಾದ್ರು ಒಂದೇ ಒಂದು ಸಲ ಒಳ್ಳೇದು ಮಾಡಿ ನೋಡು, ಅದರಲ್ಲಿ ಇರೋ ಖುಷಿ ಬೇರೆ ಯಾವುದರಲ್ಲೂ ಇಲ್ಲ ಅಂತ. ಇವತ್ತು ನನಗೆ ತುಂಬಾ ಖುಷಿ ಆಯಿತು" ಅವನ ಮಾತುಗಳಲ್ಲಿ ಆ ಆನಂದ ಉಕ್ಕಿ ಹರೀತಾ ಇತ್ತು. ನಾನು ಅವನಿಗೆ ಆ ಮಾತು ಹೇಳಿ ೪ ವರ್ಷ ಕಳೆದಿರಬೇಕು. ಯಾವಾಗಾ ಹೇಳಿದೆ ಅನ್ನೋದೂ ನನ್ನ ನೆನಪಲ್ಲೂ ಇಲ್ಲ. ವೈಚಾರಿಕವಾಗಿ ಅವನು ತುಂಬಾ ಎತ್ತರಕ್ಕೆ ಬೆಳೆದಿದ್ದ.

ಅದಕ್ಕೆ ಹೇಳಿದ್ದು, "ನಾನು ಮಡಿದ ಒಳ್ಳೆ ಕೆಲಸ" ಪುಸ್ತಕದ ಅಗತ್ಯ ಈಗ ಇದೆ.  

ಮತ್ತೆ ಸಿಗ್ತೀನಿ...

Sunday, March 4, 2012

ಗಂಗಾಜಲ


ನಾನು ಚಿಕ್ಕವನಾಗಿದ್ದಾಗಿಂದ, ಯಾರದ್ರೂ ಹಾಸಿಗೆ ಹಿಡಿದು ಇನ್ನೇನು ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಸಿಗುತ್ತೆ ಅಂತ ದಾರಿ ಕಾಯೋರು, ಹೇಳಿದ ಕೆಲವು ಮಾತುಗಳು ನೆನಪಾದವು. "ನಾನು ಸತ್ತ ಮೇಲೆ ನನ್ನ ಬಾಯಿಗೆ ಆ ಗಂಗಾಜಲ ಹಾಕೋದನ್ನ ಮರೀಬೇಡಿ". ಇಷ್ಟೇ ಅಲ್ಲ, ಇನ್ನು ಕೆಲವರು ಗಂಗಾಜಲವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿರುತ್ತಾರೆ. ಅನಾದಿಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿದ್ದು, ಇನ್ನೂ ಕೂಡ ಜನ ಇದನ್ನ ನಂಬುತ್ತಾರೆ. ಸಾಯೋ ಸಮಯದಲ್ಲಿ ಗಂಗಾಪಾನ ಮಾಡಿದರೆ ಸ್ವರ್ಗ ಪ್ರಾಪ್ತಿ ಆಗುತ್ತೆ ಅನ್ನೋದು ಅವರ ಖಯಾಲಿ. ಅದೇನೇ ಇರಲಿ, ನನಗೆ ಹೊಳೆದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದೆ. ಈ ಸ್ವರ್ಗ ಅನ್ನೋದು ಇದೆಯಾ? ಅಕಸ್ಮಾತ್ ಇದೆ ಅನ್ನೋದೇ ಆದ್ರೆ ಪುಣ್ಯ ಮಾಡಿದವರಿಗೆ ಮಾತ್ರ ಅಲ್ಲಿ ಜಾಗ ಇದೆಯಾ? ಹಾಗೆನದ್ರೂ ಬರೀ ಪುಣ್ಯವಂತರಿಗೆ ಮಾತ್ರ ಅಲ್ಲಿ ಜಾಗ ಇದೆ ಅನ್ನೋ ಹಾಗಿದ್ರೆ, ದೇವರಾಣೆ ಹೇಳ್ತೀನಿ ಅದು ಖಾಲಿ ಗೋಡೌನ್ ಥರ ಇರುತ್ತೆ. ಯಾಕೆಂದ್ರೆ ಪಕ್ಕಾ ಪುಣ್ಯವಂತರು ಅಂತ ಯಾರೂ ಇಲ್ಲ. ಸರ್ವೇ ಜನಃ ಸುಖಿನೋ ಭವಂತು ಅನ್ನೋರು ಎಷ್ಟು ಜನ ಇದ್ದಾರೆ? ಎಲ್ಲರೂ ಒಂದಲ್ಲ ಒಂದು ರೀತಿ ತಪ್ಪು ಮಾಡಿರುತ್ತಾರೆ. ದೇವರಿಗೆ ದುಡ್ಡು ಕೊಟ್ಟು ಶಾಂತಿ ಮಾಡಿಸಿ, ಪಾಪ  ಕಳೆದುಹೋಯಿತು ಅನ್ನೋ ಸುಳ್ಳು ಭರವಸೆ ಕೊಡೋಪ್ರಯತ್ನ ಮಾಡುತ್ತಾರೆ. ಆದ್ರೆ ಪಾಪಪ್ರಜ್ಞ್ಯೇ ಅನೋದು ಯಾವ ಶಾಂತಿ ಮಾಡಿದರು ಹೋಗಲಾರದು. ಪಾಪ ಪ್ರಜ್ನ್ಯೆ ಇಲ್ಲದವನೇ ನನ್ನ ಲೆಕ್ಕದಲ್ಲಿ ಪರಮ ಪಾಪಿ. ಇರೋವರೆಗೂ ಎಲ್ಲರನ್ನ ಬೈಕೊಂಡು, ಸತಾಯಿಸಿಕೊಂಡು, ಸ್ವಾರ್ಥದ ಬದುಕು ನಡೆಸೋ ನಾವು, ಕೊನೆಗಾಲದಲ್ಲಿ ಮಾತ್ರ ಗಂಗಾಜಲ ನಮ್ಮ ಬಾಯಿಗೆ ಹಾಕ್ಕೊಂಡು ಸ್ವರ್ಗದ ಆಸೆ ಕಾಣ್ತೀವಿ. ಅಲ್ಲೂ ಕಾಣುವುದು ಸ್ವಾರ್ಥ ಮತ್ತು ಆಸೆ. ಸತ್ತ ಮೇಲು ಕೂಡ ನಾನು ಸಂತೋಷದಿಂದ ಇರಬೇಕು ಅನ್ನೋ ದುರಾಸೆ!!! ಮೇಲೆ ಹೇಳಿದ ಹಾಗೆ, ಸಾಯೋವಾಗ ಪಕ್ಕದಲ್ಲಿ ಗಂಗಾಜಲ ಏನೋ ಇಟ್ಟುಕೊತೀವಿ, ಆದ್ರೆ ಅದನ್ನ ಬಾಯಿಗೆ ಸುರಿಯೋಕೆ ಒಂದು ಕೈ ಕೂಡ ಇಲ್ಲದ ಹಾಗೆ ಬಾಳು ನಡೆಸಿರ್ತೀವಿ. ಹಾಗೆನದ್ರು ಕೈಗಳನ್ನ ಘಳಿಸಿದ್ದೇ ಆದ್ರೆ, ಗಂಗಾಜಲದ ಅಗತ್ಯ ಇಲ್ಲ ಅನ್ನಿಸುತ್ತೆ.

ಜೀವಿತಾವಧಿಯಲ್ಲಿ ಒಳ್ಳೆ ಕೆಲಸ ಮಾಡಿ, ಆ ಪರಮ ಸಂತೋಷವನ್ನು ಇಲ್ಲಿಯೇ ಕಾಣುವ ಬದಲು, ಸ್ವರ್ಗ ಸತ್ತ ಮೇಲೆ ಸಿಗುತ್ತದೆ ಅನ್ನೋದು ಭ್ರಮೆಯಲ್ಲದೇ ಇನ್ನೇನು?

ನೀವು ಸ್ವರ್ಗ ಸೃಷ್ಟಿಸಿ. ಸ್ವರ್ಗಕ್ಕೆ ಹಾತೊರೆಯದಿರಿ.

ಮತ್ತೆ ಸಿಗ್ತೀನಿ...... 

Saturday, March 3, 2012

ತಿರಸ್ಕಾರ?

ನಾವು ಯಾರನ್ನೋ ತುಂಬಾ ಪ್ರೀತಿ ಮಾಡ್ತೀವಿ ಆದ್ರೆ ಅದರ ಅರಿವು ಅವರಿಗೆ ಆಗುವುದಿಲ್ಲ. ಆ ಅರಿವು ಆಗಲೇಬೇಕು ಅನ್ನೋದು ನಮ್ಮ ಅಪೇಕ್ಷೆ ಆಗಿರುತ್ತೆ, ಆದ್ರೆ ಅಪೇಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದೇ ಇರಬಹುದು. ಆಗ ಸ್ವಲ್ಪ ಮನಸ್ಸಿಗೆ ಬೇಸರ ಆಗುತ್ತೆ. ಆದ್ರೆ ಈ ಮನಸ್ಸು ಅನ್ನೋದು ನಾಚಿಕೆಗೇಡಿ ಅದಕ್ಕೆ ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದರು ಮಾಡಿದ ತಪ್ಪನ್ನೆ ಮತ್ತೆ ಮತ್ತೆ ಮತ್ತೆ ಮಾಡುತ್ತೆ. ಒಲವಿನ ಬೆಲೆ ಗೊತ್ತಿಲ್ಲದ ಕಲ್ಲು ಮನಸ್ಸಿನ ಜನರಿಂದ ಸಿಗುವ ತಿರಸ್ಕಾರಕ್ಕೆ ಮನಸ್ಸು ಪಾತ್ರವಾಗುತ್ತೆ. ಹಾಗಾದ್ರೆ ಪ್ರೀತ್ಸೋದೆ ತಪ್ಪ? ಖಂಡಿತ ಇಲ್ಲ, ಪ್ರೀತ್ಸೋದು ನಿಮ್ಮ ಇಷ್ಟ ಹೇಗೋ ಹಾಗೇನೆ ನಿಮಗೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡೋದು ಅವರ ಇಷ್ಟ. ನಿಜವಾದ ಪ್ರೀತಿ ಯಾವುದೇ ಷರತ್ತುಗಳನ್ನುಇಟ್ಟುಕೊಳ್ಳುವುದಿಲ್ಲ. ಪ್ರೀತಿಸೋ ಮನಸ್ಸಿಗೆ ತಿರಸ್ಕಾರಗಳು ಒದಗಿ ಬಂದಾಗ ಅದು ಕುಗ್ಗಿ ಹೋಗುತ್ತದೆ. ನಮಗೇ ಗೊತ್ತಿಲ್ಲದ ಯಾವುದೊ ಮೌನ ನಮ್ಮನ್ನ ಆವರಿಸುತ್ತದೆ. ಇಂಥ ಪರಿಸ್ಥಿಗಳಲ್ಲಿ, ನಮಗೆ ನಾವು ಸಮಾಧಾನ ಮಾಡಿಕೊಂಡಷ್ಟು, ಬೇರೆ ಯಾರು ಬಹುಶಃ ಮಾಡಲು ಆಗೋದಿಲ್ಲ.
ಮನಸ್ಸಿಗೆ ಬೇಸರವಾದಾಗ ನಾನು ಯಾರಿಗೂ ಬೇಡವಾದೆ ಅನ್ನೋ ವಿಚಿತ್ರ ಕಲ್ಪನೆ ಬರೋದು ಸಹಜ. ಇಂತಹ ಸಮಯದಲ್ಲಿ, ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿ, ಬೇರೆ ಕಡೆ ವಿಚಾರಗಳು ಹರಿಯುವಂತೆ ಮಾಡಿದ್ರೆ, ತಿರಸ್ಕ್ರತನಾದೆ ಅನ್ನೋ ಭಾವನೆಗೆ ಸ್ವಲ್ಪ ವಿಶ್ರಾಂತಿ ಸಿಗಬಹುದು. ಈ ತಿರಸ್ಕೃತ ಭಾವನೆ ನಿಮ್ಮ ಯಶಸ್ಸಿನ ಕತ್ತು ಹಿಸುಕುವ ಸಾಧ್ಯತೆಗಳೇ ಹೆಚ್ಚು. ಆದ್ರೆ ಅದೇ ಯಶಸ್ಸು, ತಿರಸ್ಕಾರವನ್ನು ಪುರಸ್ಕಾರವನ್ನಾಗಿಸುವ ಶಕ್ತಿ ಹೊಂದಿದೆ. ನಿಮ್ಮ ಬಗ್ಗೆ ನಿಮಗೆ ಒಲವು ಇದ್ದರೆ ಸಾಕು, ಬೇರೆಯವರ ತಿರಸ್ಕಾರ ಅವರ ಬಾಲಿಶತನ ಅಂತ ತಿಳಿದು ನಕ್ಕು ಸುಮ್ಮನಾಗಿ. ನೀವು ಪ್ರೀತಿಸ್ತಾನೆ ಇರಿ...

ಮತ್ತೆ ಸಿಗ್ತೇನೆ....